

ಹಾವೇರಿ: ನೆಹರು ಪ್ರಧಾನಿ ಆಸೆಗಾಗಿ ಭಾರತ ವಿಭಜನೆ ಆಯಿತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿದರು
ಎಸ್.ಐ.ಆರ್ (S.I.R) ಪ್ರಕ್ರಿಯೆ ಸಭೆಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಶ್ಯಾಮ್ ಪ್ರಸಾದ್ ಮುಖರ್ಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದರು. ನೆಹರೂ ಅವರ ಮೊದಲನೇ ರಾಷ್ಟ್ರೀಯ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು ಎಂದು ತಿಳಿಸಿದರು.
1952 ರ ಪೂರ್ವದಲ್ಲಿ ರಾಷ್ಟ್ರೀಯ ಸರ್ಕಾರ ರಚನೆಯಾದಾಗ ಚುನಾಯಿತ ಸರ್ಕಾರ ಇರಲಿಲ್ಲ. ದೇಶದ ವಿವಿಧ ಭಾಗದಲ್ಲಿ ಇರುವಂತಹ ಅತ್ಯಂತ ಪ್ರಭಾವಿ ಚಿಂತಕರು ಮತ್ತು ದೇಶದ ಬಗ್ಗೆ ಸಂಪೂರ್ಣವಾಗಿ ಎಲ್ಲಾ ರೀತಿಯ ವಿಚಾರಗಳನ್ನು ತಿಳಿದುಕೊಂಡು ಹೋಗಿರುವಂತಹ ಮೇಧಾವಿಗಳಿಗೆ ಅಲ್ಲಿ ಕ್ಯಾಬಿನೆಟ್ ದರ್ಜೆ ಕೊಟ್ಟಿತ್ತು. ಅದರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಇದ್ದರು. ಸೋಶಿಯಲಿಸ್ಟ್ ಪಾರ್ಟಿಯ ಜನರು ಇದ್ದರು. ಕಮ್ಯುನಿಸ್ಟ್ ಪಾರ್ಟಿಯ ಡಾಂಗೆ ಅಂತಹ ಮೇಧಾವಿಗಳಿದ್ದ ಕ್ಯಾಬಿನೆಟ್ನಲ್ಲಿ ಬಂಗಾಳದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಇಡೀ ಭಾರತದ ಒಂದು ಕಲ್ಪನೆಯನ್ನು ಇಟ್ಟುಕೊಂಡು ಹೋರಾಟ ಮಾಡಿದ್ದರು ಎಂದು ಸ್ಮರಿಸಿದರು.
ಅಖಂಡ ಭಾರತ ಅಂತ ಅಂದರೆ ಈಗೇನು ಪಾಕ್ ಆಕ್ರಮಿತ ಕಾಶ್ಮೀರ ಅಂತ ಕರೆಯುತ್ತಾರೆ, ಅಲ್ಲಿಂದ ಹಿಡಿದು ಭೂತಾನ್ ಬರ್ಮಾವರೆಗೂ ದಕ್ಷಿಣದಲ್ಲಿ ಶ್ರೀಲಂಕಾವರೆಗೂ ಇತ್ತು. ಇವತ್ತಿಗೂ ಈ ಎಲ್ಲಾ ದೇಶದಲ್ಲಿ ನಮ್ಮ ಆದಿ ಸಂಸ್ಕೃತಿ ಮತ್ತು ದೇವರು ದೇವಸ್ಥಾನದ ಪೂಜೆ ಆಗುತ್ತಿದೆ ಎಂದು ಹೇಳಿದರು.
ಶ್ರೀರಾಮಚಂದ್ರನ ಪೂಜೆ ಶ್ರೀಲಂಕಾದಲ್ಲೂ ಆಗುತ್ತೆ, ನೇಪಾಳದಲ್ಲೂ ಆಗುತ್ತದೆ, ಭೂತಾನದಲ್ಲೂ ಆಗುತ್ತದೆ. ಬುದ್ಧನ ಒಂದು ಪ್ರಾರ್ಥನೆ ಅಫ್ಘಾನಿಸ್ತಾನದಲ್ಲೂ ಆಗುತ್ತದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಂತೂ ಸಾವಿರಾರು ಹಿಂದೂ ದೇವಸ್ಥಾನಗಳಿವೆ. ಆದರೆ ದೇಶ ವಿಭಜನೆ ವೇಳೆ ಕಾಂಗ್ರೆಸ್ಸಿನ ನಾಯಕರು ವಿಶೇಷವಾಗಿ ಜವಾಹರಲಾಲ್ ನೆಹರು ವಿಭಜಿತ ಭಾರತದ ಪ್ರಧಾನಮಂತ್ರಿಯಾಗುವಂತಹ ಒಂದು ಮಹದಾಸೆಯಿಂದ, ರಾಜಿ ಪಂಚಾಯಿತಿ ಮಾಡಿ ದೇಶ ವಿಭಜನೆ ಆಯಿತು, ಸ್ವತಂತ್ರ ಬಂತು ಎಂದು ಹೇಳಿದರು.
1951 ರಲ್ಲಿ ಶ್ಯಾಮಪ್ರಸಾದ್ ಮುಖರ್ಜಿಯವರು ಜನಸಂಘದ ಸ್ಥಾಪಿಸಿ ದೇಶಕ್ಕಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿರುವಂತಹ ಶ್ರೇಷ್ಠ ನಾಯಕ. ಅವರ ವಿಚಾರ ಮತ್ತು ಅವರ ಆದರ್ಶಗಳು ಇಂದು ಕೂಡ ನಮಗೆ ದಾರಿದೀಪವಾಗಿದ್ದಾವೆ. ಆ ದಾರಿದೀಪ ಮುಂದಿನ ಪೀಳಿಗೆಗೂ ಕೂಡ ಇರಬೇಕು ಅನ್ನುವ ಕಾರಣಕ್ಕಾಗಿ ಈ ಜನ್ಮದಿನಾಚರಣೆಯನ್ನು ನಾವು ಆಚರಣೆ ಮಾಡುತ್ತಿದ್ದೇವೆ. ಅವರ ವಿಚಾರಧಾರೆಗಳನ್ನು ಓದಿ ತಿಳ್ಕೊಂಡು, ಅನುಷ್ಠಾನ ನಿಮ್ಮ ಬದುಕಿನಲ್ಲಿ ಮಾಡಿದರೆ ಅದು ಸಾರ್ಥಕತೆ ಆಗುತ್ತದೆ ಎಂದು ಅವರು ತಿಳಿಸಿದರು.