ದಕ್ಷಿಣ ಕನ್ನಡ: 'ತೂಗುಸೇತುವೆಗಳ ಸರದಾರ' ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಜ್ ವಿಧಿವಶ

ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ತೂಗುಸೇತುವೆಗಳನ್ನು ನಿರ್ಮಿಸುವ ಮೂಲಕ ಗಮನ ಸೆಳೆದಿದ್ದರು. ಗ್ರಾಮೀಣ ಪ್ರದೇಶದಲ್ಲಿ ಇಂತಹ ನೂರಾರು ತೂಗು ಸೇತುವೆಗಳನ್ನು ನಿರ್ಮಿಸಿದ್ದರು
Girish Bharadwaj
ಡಾ. ಗಿರೀಶ್ ಭಾರದ್ವಜ್
Updated on

ಸುಳ್ಯ: ಕೇವಲ ತಂತ್ರಜ್ಞಾನದಿಂದಷ್ಟೇ ಅಲ್ಲ, ಗ್ರಾಮೀಣ ಜನರ ಬದುಕಿಗೆ ಆಸರೆಯಾಗುವ ಮೂಲಕ ದೇಶದ ಗಮನ ಸೆಳೆದಿದ್ದ ಅಪರೂಪದ ತಾಂತ್ರಿಕ ಯೋಗಿ, ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಜ್ (76) ಅವರು ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಸುಳ್ಯದ ಕೆವಿಜೆ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಗಿರೀಶ್ ಭಾರದ್ವಾಜ ಅವರು ಕೆಲವು ದಿನಗಳ ಹಿಂದೆ ಉತ್ತರಾಖಾಂಡ ರಾಜ್ಯದ ದೇವಸ್ಥಾನಗಳಿಗೆ ಹೋಗಿ ಬಂದಿದ್ದರು. ಹೃದಯ ಸಂಬಂಧಿ ಸಮಸ್ಯೆಯಿಂದ ಅವರು ಕೆಲ ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ತೂಗುಸೇತುವೆಗಳನ್ನು ನಿರ್ಮಿಸುವ ಮೂಲಕ ಗಮನ ಸೆಳೆದಿದ್ದರು. ಗ್ರಾಮೀಣ ಪ್ರದೇಶದಲ್ಲಿ ಇಂತಹ ನೂರಾರು ತೂಗು ಸೇತುವೆಗಳನ್ನು ನಿರ್ಮಿಸಿದ್ದರು. ಅವರ ಈ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತ್ತು.

ನದಿ, ಹಳ್ಳ-ಕೊಳ್ಳಗಳಿಂದಾಗಿ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡಿದ್ದ ನೂರಾರು ಹಳ್ಳಿಗಳಿಗೆ ತೂಗುಸೇತುವೆಗಳ ಮೂಲಕ ಕೊಂಡಿಯಾಗಿದ್ದ ಅವರ ಅಗಲಿಕೆ ಗ್ರಾಮೀಣ ಭಾರತಕ್ಕೆ ತುಂಬಲಾರದ ನಷ್ಟವಾಗಿದೆ.

Girish Bharadwaj
ಪಾಂಡವಾನಿ ದಂತಕಥೆ, ಪದ್ಮವಿಭೂಷಣ ಪುರಸ್ಕೃತೆ ತೀಜನ ಬಾಯಿ ನಿಧನ; ಪ್ರಧಾನಿ ಮೋದಿ ಸಂತಾಪ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಇಂಜಿನಿಯರಿಂಗ್ ಪದವೀಧರರಾಗಿದ್ದ ಅವರು, ಬಹುದೊಡ್ಡ ಕಂಪನಿಗಳ ಆಕರ್ಷಕ ಉದ್ಯೋಗದ ಆಫರ್‌ಗಳನ್ನು ಬದಿಗೊತ್ತಿ ಗ್ರಾಮೀಣ ಜನರ ಸಬಲೀಕರಣಕ್ಕೆ ಶ್ರಮಿಸಿದರು. ಸರ್ಕಾರಿ ವ್ಯವಸ್ಥೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕೈಚೆಲ್ಲುವ ಜಾಗದಲ್ಲಿ, ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ನಿರ್ಮಿಸಬಹುದಾದ ಪರಿಸರಸ್ನೇಹಿ ತೂಗುಸೇತುವೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ವಿನ್ಯಾಸಗೊಳಿಸಿ ದೇಶಾದ್ಯಂತ ಕ್ರಾಂತಿ ಸೃಷ್ಟಿಸಿದ್ದರು.

ಬ್ರಿಡ್ಜ್ ಮ್ಯಾನ್ ಎಂದೇ ಖ್ಯಾತಿ: ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಗಿರೀಶ್ ಅವರು ಸುಳ್ಯದಲ್ಲೇ ತಂದೆಯವರ ಜೊತೆಗೂಡಿ ಸಣ್ಣದೊಂದು ವರ್ಕ್‌ಶಾಪ್ ಆರಂಭಿಸಿದರು. ಆದರೆ ಅವರ ಇಂಜಿನಿಯರಿಂಗ್ ಜ್ಞಾನ ಬರೀ ಕಬ್ಬಿಣದ ಕೆಲಸಕ್ಕೆ ಸೀಮಿತವಾಗಲಿಲ್ಲ. ಹಳ್ಳಿಗಳ ಜನರು ಮಳೆಗಾಲದಲ್ಲಿ ದಾಟಲಾಗದ ನದಿಗಳ ಎದುರು ಅನುಭವಿಸುತ್ತಿದ್ದ ಯಾತನೆ, ಶಾಲೆಗೆ ಹೋಗಲಾಗದ ಮಕ್ಕಳ ಪರದಾಟ ಅವರನ್ನು ಚಿಂತನೆಗೆ ಹಚ್ಚಿತು.

1989ರಲ್ಲಿ ಸುಳ್ಯದ ಅರಂಬೂರಿನ ಪಯಸ್ವಿನಿ ನದಿಗೆ ಮೊದಲ ಬಾರಿಗೆ ಅವರು ನಿರ್ಮಿಸಿದ ತೂಗುಸೇತುವೆ ಅವರ ಬದುಕಿನ ಮಹತ್ತರ ತಿರುವಾಗಿತ್ತು. ಕೇವಲ ಸ್ಥಳೀಯ ಸಾಮಾಗ್ರಿ ಮತ್ತು ಸೀಮಿತ ಬಜೆಟ್‌ನಲ್ಲಿ ಅವರು ನಿರ್ಮಿಸಿದ ಆ ಸೇತುವೆ ಯಶಸ್ವಿಯಾದಾಗ, ಇಡೀ ದೇಶವೇ ಇವರ ಕಡೆ ತಿರುಗಿ ನೋಡುವಂತಾಯಿತು. ಅಲ್ಲಿಂದ ಆರಂಭವಾದ ಅವರ ಈ ಪಯಣ ನಿರಂತರವಾಗಿ ಸಾಗಿತು.

ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ಒಡಿಶಾ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ 300ಕ್ಕೂ ಹೆಚ್ಚು ತೂಗುಸೇತುವೆಗಳನ್ನು ಇವರು ನಿರ್ಮಿಸಿದ್ದಾರೆ. ಆದ್ದರಿಂದ ಇವರು ಬ್ರಿಡ್ಜ್ ಮ್ಯಾನ್, ತೂಗುಸೇತುವೆಗಳ ಸರದಾರ ಎಂದು ಖ್ಯಾತಿಯಾಗಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com