

ಬೆಂಗಳೂರು: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಆದಾಯ ಮೀರಿ ಆಸ್ತಿ (DA) ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಲು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ಪತ್ರ ಬರೆದ ಮರುದಿನವೇ, ಲೋಕಾಯುಕ್ತ ಐಪಿಎಸ್ ಅಧಿಕಾರಿ ಶಿವಪ್ರಕಾಶ್ ದೇವರಾಜು ಅವರನ್ನು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ-1 (ಎಸ್ಪಿ-1) ಹುದ್ದೆಯಿಂದ ಬಿಡುಗಡೆಗೊಳಿಸಿದೆ. ಅವರನ್ನು ಮೂಲ ಇಲಾಖೆಗೆ ಮತ್ತೆ ಕಳುಹಿಸಲಾಗಿದೆ.
ಲೋಕಾಯುಕ್ತದಲ್ಲಿ ಒಂದು ವರ್ಷಕ್ಕೂ ಕಡಿಮೆ ಅವಧಿ ಸೇವೆ ಸಲ್ಲಿಸಿದ್ದ ಶಿವಪ್ರಕಾಶ್ ದೇವರಾಜು ಅವರು ನಿನ್ನೆ ಬೆಳಗ್ಗೆ 10.30ಕ್ಕೆ ಕಚೇರಿಗೆ ಆಗಮಿಸಿದ ವೇಳೆ ವರ್ಗಾವಣೆ ಆದೇಶವನ್ನು ಸ್ವೀಕರಿಸಿದರು.
ಅದರ ಹಿಂದಿನ ದಿನವೇ, 2022ರಲ್ಲಿ ಜಾರಿ ನಿರ್ದೇಶನಾಲಯ (ED) ಜಮೀರ್ ಅಹ್ಮದ್ ನಿವಾಸದ ಮೇಲೆ ನಡೆಸಿದ್ದ ದಾಳಿಯಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ದಾಖಲಾದ ಡಿಎ ಪ್ರಕರಣದ ತನಿಖೆಯನ್ನು ಶಿವಪ್ರಕಾಶ್ ನೇತೃತ್ವದ ತಂಡ ಪೂರ್ಣಗೊಳಿಸಿತ್ತು. ಬಳಿಕ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, "ಶಿವಪ್ರಕಾಶ್ ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ಕೆಲವು ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ. ಸಂಸ್ಥೆಯ ಆಡಳಿತಾತ್ಮಕ ಅನುಕೂಲಕ್ಕಾಗಿ ಅವರನ್ನು ಮೂಲ ಇಲಾಖೆಗೆ ಕಳುಹಿಸಲಾಗಿದೆ," ಎಂದು ಹೇಳಿದರು.
ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 15(4)ರ ಪ್ರಕಾರ, ಲೋಕಾಯುಕ್ತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಡಳಿತಾತ್ಮಕ ಶಿಸ್ತು ನಿಯಂತ್ರಣದ ವ್ಯಾಪ್ತಿಗೆ ಒಳಪಡುತ್ತಾರೆ.
2014ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಶಿವಪ್ರಕಾಶ್ ದೇವರಾಜು, 2025ರ ಜುಲೈ 30ರಂದು ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಆಸಕ್ತಿ ವ್ಯಕ್ತಪಡಿಸಿ ಪತ್ರ ಬರೆದ ಬಳಿಕ ಲೋಕಾಯುಕ್ತ ಎಸ್ಪಿ-1 ಆಗಿ ನೇಮಕಗೊಂಡಿದ್ದರು.
ಮೂಲಗಳ ಪ್ರಕಾರ, ಅವರು ಹಲವು ಸೂಕ್ಷ್ಮ ಹಾಗೂ ಹೈ-ಪ್ರೊಫೈಲ್ ಪ್ರಕರಣಗಳ ತನಿಖೆ ನಡೆಸಿದ್ದರು. ಲೋಕಾಯುಕ್ತ ದಾಳಿ ನಡೆಯುವ ಮಾಹಿತಿ ಸೋರಿಕೆ ಮಾಡಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಕಡಿವಾಣ ಹಾಕುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಅವರ ನೇತೃತ್ವದಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಗಳಲ್ಲಿ, ಕಳೆದ ಜುಲೈ 7ರಂದು ಬೆಂಗಳೂರು ವಿಶೇಷ ಉಪ ಆಯುಕ್ತ ಎಂ.ಕೆ. ಜಗದೀಶ್ ಹಾಗೂ ಇತರ ಇಬ್ಬರು ಅಧಿಕಾರಿಗಳ ಕಚೇರಿ ಮತ್ತು ನಿವಾಸಗಳ ಮೇಲೆ ನಡೆದ ದಾಳಿ ಪ್ರಮುಖವಾಗಿತ್ತು. ಹುಣಸಮಾರನಹಳ್ಳಿಯಲ್ಲಿ ಹಲವು ಕೋಟಿ ರೂಪಾಯಿ ಮೌಲ್ಯದ 13 ಎಕರೆ ಭೂಮಿಯನ್ನು ಖಾಸಗಿಯವರಿಗೆ ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದಡಿ ಈ ದಾಳಿ ನಡೆಸಲಾಗಿತ್ತು.
ಇದಲ್ಲದೆ, ಮದ್ಯ ಮಾರಾಟ ಪರವಾನಗಿ ನವೀಕರಣ ಸೇರಿದಂತೆ ವಿವಿಧ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಎಂಟು ಉಪ ಆಯುಕ್ತರ ಮೇಲೂ ದಾಳಿ ನಡೆಸಲಾಗಿತ್ತು.
ಲೋಕಾಯುಕ್ತದಲ್ಲಿ ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಶಿವಪ್ರಕಾಶ್ ದೇವರಾಜು 31 ಟ್ರ್ಯಾಪ್ ಕಾರ್ಯಾಚರಣೆಗಳು, 17 ಆದಾಯ ಮೀರಿ ಆಸ್ತಿ ಪ್ರಕರಣಗಳು ಹಾಗೂ 11 ಇತರೆ ಪ್ರಕರಣಗಳನ್ನು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಡಿಎ ಪ್ರಕರಣಗಳಲ್ಲಿ ಅಂದಿನ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದ ಅಧಿಕಾರಿಯೊಬ್ಬರೂ ಸೇರಿದ್ದರು.
ಭ್ರಷ್ಟ ಅಧಿಕಾರಿಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (AI) ಬಳಸಿ ಇಲಾಖೆವಾರು ಮಾಹಿತಿ ಸಂಗ್ರಹ (ಡಾಸಿಯರ್) ಸಿದ್ಧಪಡಿಸಿದ್ದ ಮೊದಲ ಅಧಿಕಾರಿಯಾಗಿಯೂ ಅವರು ಗುರುತಿಸಿಕೊಂಡಿದ್ದರು. ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಹಲವು ಪ್ರಸ್ತಾವನೆಗಳನ್ನು ಕಳುಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಲೋಕಾಯುಕ್ತದಲ್ಲಿ ನಾನು ಮಾಡಿದ ಕೆಲಸದ ಬಗ್ಗೆ ನನಗೆ ತೃಪ್ತಿ ಇದೆ. ಇದು ಅಲ್ಪಾವಧಿಯ ಸೇವೆಯಾಗಿತ್ತು. ಇನ್ನೂ ಸಾಕಷ್ಟು ಕೆಲಸ ಮಾಡಬೇಕಿತ್ತು ಎಂದು ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.
2016ರಲ್ಲಿ ಸೇವೆಗೆ ಸೇರಿದ ಬಳಿಕ ತಮ್ಮ ಹತ್ತು ವರ್ಷಗಳ ವೃತ್ತಿಜೀವನದಲ್ಲಿ ಅವರು ಒಂಭತ್ತು ಬಾರಿ ವರ್ಗಾವಣೆಗೊಂಡಿದ್ದಾರೆ.