

ಬಿಡದಿ ಟೌನ್ ಶಿಪ್ ಯೋಜನೆ ಜಾರಿಗೆ ಸಂಬಂಧ ಇನ್ನೆರಡು ಮೂರು ತಿಂಗಳೊಳಗೆ ಸಮಿತಿ ರಚನೆ ಮಾಡಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸಮಿತಿಯಲ್ಲಿ ಯಾರ್ಯಾರು ಇರಬೇಕು ಎಂದು ನಿರ್ಧಾರ ಮಾಡುತ್ತೇವೆ. ನನಗೆ ಬಿಡದಿ ಟೌನ್ ಶಿಪ್ ಯೋಜನೆ ಜಾರಿಗೆ ತರುವ ತರಾತುರಿಯಲ್ಲ, ಶಾಸಕರು, ಅಧಿಕಾರಿಗಳು ಅಥವಾ ನಿವೃತ್ತ ನ್ಯಾಯಾಧೀಶರು ಸಮಿತಿಯಲ್ಲಿರಬೇಕೊ ಎಂದು ತೀರ್ಮಾನ ಮಾಡುತ್ತೇವೆ. ಅವರು ನೀಡಿದ ವರದಿ ಆಧಾರದ ಮೇಲೆ ಮುಂದುವರಿಯುತ್ತೇವೆ ಎಂದು ತಿಳಿಸಿದರು.
ಬಿಡದಿ ಟೌನ್ ಶಿಪ್ ಯೋಜನೆ ಮಾಡುವ ಯಾವುದೇ ಉದ್ದೇಶ ನನಗಿಲ್ಲ, ಇದು ನನ್ನ ಯೋಜನೆ ಅಲ್ಲ, 2006ರಲ್ಲಿ ಹೆಚ್ ಡಿ ಕುಮಾರಸ್ವಾಮಿ, ಬಿ ಎಸ್ ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಆರಂಭಿಸಿದ್ದು, ಅದನ್ನು ನಾನು ಇಂದು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಅಷ್ಟೆ, ರೈತರ ಜಮೀನನ್ನು ಖಂಡಿತಾ ಬಲವಂತವಾಗಿ ಕಿತ್ತುಕೊಳ್ಳುವುದಿಲ್ಲ, ಅವರು ಸ್ವಇಚ್ಛೆಯಿಂದ ನೀಡಿದರೆ ಮಾತ್ರ ಮುಂದುವರಿಸುತ್ತೇವೆ, ಸಮಿತಿಯಲ್ಲೇ ತೀರ್ಮಾನ ಮಾಡುತ್ತೇವೆ, ಬಿಡದಿ ಟೌನ್ಶಿಪ್ ನನ್ನ ಕನಸಿನ ಯೋಜನೆಯಲ್ಲ; ನಮ್ಮ ಹಿರಿಯರು ರೂಪಿಸಿದ ಮಾರ್ಗಸೂಚಿಗೆ ನಾನು ಮುನ್ನುಡಿ ಬರೆಯುತ್ತಿದ್ದೇನೆ ಎಂದು ಹೇಳಿದರು.
ರೈತರನ್ನು ತಪ್ಪುದಾರಿಗೆಳೆಯುವ ಸಂಚನ್ನು ಇಂದು ದೇವೇಗೌಡ ಕುಟುಂಬ ಮಾಡುತ್ತಿದೆ. ನಾನು ಮುಖ್ಯಮಂತ್ರಿಯಾಗಿರುವುದನ್ನು ಸಹಿಸಿಕೊಳ್ಳಲು ಅವರಿಂದ ಆಗುತ್ತಿಲ್ಲ, ಹೇಗಾದರೂ ಮಾಡಿ ನನ್ನನ್ನು ಜೈಲಿಗೆ ಕಳುಹಿಸುವ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದರು.
ರೈತರು ಜಮೀನು ನೀಡುವಾಗ ಕಾನೂನಾತ್ಮಕವಾಗಿ ವಿಷಯವನ್ನು ನಿರ್ವಹಿಸಲು ಸಮಿತಿ ರಚಿಸುತ್ತಿದ್ದೇವೆ, ಇಲ್ಲಿ ಸರ್ಕಾರ ಮತ್ತು ರೈತರ ನಡುವಿನ ವ್ಯವಹಾರ, ರೈತರ ಜಮೀನಿಗೆ ನಿಖರ ನ್ಯಾಯಬದ್ಧ ಪರಿಹಾರ ನೀಡಲಾಗುವುದು, ಈ ಯೋಜನೆ ಕೈಬಿಟ್ಟಿಲ್ಲ, ಹಾಗೆಂದು ಒತ್ತಾಯಪೂರ್ವಕವಾಗಿ ರೈತರಿಂದ ಜಮೀನು ಕಿತ್ತುಕೊಳ್ಳುವುದಿಲ್ಲ ಎಂದರು.