

ಬೆಂಗಳೂರು: ರಾಜ್ಯದಲ್ಲಿನ ಬರ ಪರಿಸ್ಥಿತಿ ಮತ್ತು ಅದನ್ನು ನಿರ್ವಹಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಭಾನುವಾರ ತುರ್ತು ಸಚಿವ ಸಂಪುಟ ಸಭೆ ಕರೆದಿರುವುದಾಗಿ ಶನಿವಾರ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಅಣೆಕಟ್ಟುಗಳಲ್ಲಿ ನೀರನ್ನು ಸದ್ಯಕ್ಕೆ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಕಾಯ್ದಿರಿಸಲಾಗುತ್ತಿದೆ. ಜಲಾಶಯಗಳಲ್ಲಿನ ನೀರಿನ ಸಂಗ್ರಹ ಮಟ್ಟವನ್ನು ಆಧರಿಸಿ ಬೆಳಗಳಿಗೆ ನೀರು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ನೆರೆಯ ರಾಜ್ಯಗಳು, ವಿಶೇಷವಾಗಿ ತಮಿಳುನಾಡು, ಕಾವೇರಿ ನದಿ ನೀರು ಬಿಡುಗಡೆಗಾಗಿ ಒತ್ತಡ ಹೇರುತ್ತಿದೆ ಎಂದು ಸಿಎಂ ಶಿವಕುಮಾರ್ ತಿಳಿಸಿದ್ದಾರೆ.
"ನಾಳೆ ನಾನು ತುರ್ತು ಸಚಿವ ಸಂಪುಟ ಸಭೆ ಕರೆದಿದ್ದೇನೆ. ಗುರುವಾರವೇ ಈ ಸಂಪುಟ ಸಭೆ ನಡೆಸಲು ಯೋಜಿಸಿದ್ದೆವು. ಆದರೆ ನಾನು ದೆಹಲಿಗೆ ಹೋಗಿದ್ದರಿಂದ ಸಾಧ್ಯವಾಗಲಿಲ್ಲ. ಬರ ಪರಿಸ್ಥಿತಿಯ ಬಗ್ಗೆ ನಾವು ವಿಶೇಷವಾಗಿ ಚರ್ಚಿಸಬೇಕು. ಬೆಳಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಲ್ಲಾ ಜಿಲ್ಲೆಗಳ ಉಪ ಆಯುಕ್ತರು, ಜಿಲ್ಲಾ ಪಂಚಾಯತ್ ಸಿಇಒಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ಇದೆ" ಎಂದು ಸಿಎಂ ತಿಳಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬರಗಾಲದ ಪರಿಸ್ಥಿತಿ ಮತ್ತು ಅನುಷ್ಠಾನಗೊಳಿಸಬಹುದಾದ ಯೋಜನೆಗಳು ಮತ್ತು ಕ್ರಮಗಳ ಕುರಿತು ಈಗಾಗಲೇ ಮಾಹಿತಿ ತೆಗೆದುಕೊಂಡಿದ್ದೇವೆ. ಬರಗಾಲದಲ್ಲಿ ಗುಳೆ ಹೋಗುವುದು ಹೆಚ್ಚಾಗಿದೆ. ಏನೇನು ಕೆಲಸ ತೆಗೆದುಕೊಳ್ಳಬೇಕು ನೋಡಬೇಕು, ಆದ್ರೆ ಗುಳೆ ಜಾಸ್ತಿ ಆಗ್ತಿದೆ. ಆ ನಂತರ ಕೇಂದ್ರದೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.
ಕೇಂದ್ರಕ್ಕೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿದ ಸಿಎಂ, ಇನ್ನೂ ಏನೂ ಇಲ್ಲ. ಬರೆದ್ಮೇಲೆ ಅವರು ರಿಪ್ಲೈ ಮಾಡಲ್ಲ ಎಂಬ ಅರಿವಿದೆ. ಇನ್ನೂ ಮಾಹಿತಿ ಕಳಿಸಬೇಕು. ಎಲ್ಲಿ, ಎಷ್ಟು ಮಳೆಯಾಗಿದೆ ಅಂತ ಮಾಹಿತಿ ಇದೆ ಎಂದು ತಿಳಿಸಿದರು.
ತಮಿಳುನಾಡಿನವರದ್ದು ನೀರು ಬಿಡಬೇಕಂತ ತುಂಬಾ ಒತ್ತಾಯ ಇದೆ. ತುಂಗಭದ್ರಾದಲ್ಲೂ ಒತ್ತಡ ಇದೆ. ಡ್ಯಾಮ್ ಭರ್ತಿಯಾದ್ರೆ ನಿಮಗೆ ನೀರು ಕೊಡುತ್ತೇವೆ. ಈಗೇನು ತೊಂದ್ರೆ ಇಲ್ಲ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದ್ರು.
ಕಾವೇರಿ ನದಿ ನೀರು ವಿಚಾರವಾಗಿ ಕಮೆಂಟ್ ಮಾಡೋದಿಲ್ಲ. ಸಾಕಷ್ಟು ವಿವಾದ ಇದೆ. ಅದರ ಬಗ್ಗೆ ಚರ್ಚೆ ಮಾಡಲ್ಲ. ನಾನು ದೆಹಲಿಗೆ ಹೋಗುತ್ತೇನೆ. ಇದು ನಮ್ಮ ಹಕ್ಕು, ಸುಪ್ರೀಂಕೋರ್ಟ್ ಕೂಡ ಹೇಳಿದೆ. ನಾವು ನಮ್ಮ ಕೆಲಸ ಮಾಡುತ್ತೇವೆ. ಮೇಕೆದಾಟು ಯೋಜನೆ ತಮಿಳುನಾಡಿಗೆ ಹೆಲ್ಪ್ ಆಗುತ್ತದೆ ಎಂದು ತಿಳಿಸಿದರು.