

ಬೆಂಗಳೂರು: ಚೆನ್ನಮ್ಮ ದೇವೇಗೌಡರಿಗಾಗಿ ಊಟ ಮಾಡದೇ ಕಾಯುತ್ತಿದ್ದರು. ಅವರಿಗಾಗಿ ಇವರು ಕಾಯುತ್ತಿದ್ದರು, ಇವರಿಗಾಗಿ ಅವರು ಕಾಯುತ್ತಿದ್ದರು ಎಂದು ಅತ್ತೆ ಚೆನ್ನಮ್ಮ ಅವರನ್ನು ನೆನೆದು ಅಳಿಯ ಡಾ.ಸಿ.ಎನ್ ಮಂಜುನಾಥ್ ಭಾವುಕರಾಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚೆನ್ನಮ್ಮ ಅವರಿಗೆ ಒಂದು ವರ್ಷದಿಂದ ಉಸಿರಾಟದ ಸಮಸ್ಯೆಯಿತ್ತು. ಏಳು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದೆವು. ಆಗ ಚೇತರಿಸಿಕೊಂಡಿದ್ದರು. ಆದರೂ ಆಗಾಗ ಮತ್ತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಪದ್ಮನಾಭನಗರದ ಅತ್ತಿಗೆ ಮನೆಯಲ್ಲಿ ಐಸಿಯು ಮಾಡಿದ್ದೆವು. ಅಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದೆವು. ಸ್ಟಾಫ್ ನರ್ಸ್ ಕೂಡ ಇದ್ದರು. ಚೆನ್ನಮ್ಮ ವೀಲ್ ಚೇರ್ನಲ್ಲಿಯೇ ಪೂಜೆ ಮಾಡುತ್ತಿದ್ದರು, ಓಡಾಡುತ್ತಿದ್ದರು ಎಂದರು.
ಹಿಂದೆ ಆ್ಯಸಿಡ್ ದಾಳಿಯಾದಾಗ ಶೇ.2ರಷ್ಟು ಮಾತ್ರ ಬದುಕುಳಿಯುತ್ತಾರೆ ಎಂದಿದ್ದರು, ಆದರೂ ಬದುಕಿದ್ದರು. ಮುಖಕ್ಕೆ ಆ್ಯಸಿಡ್ ಬಿದ್ದಿದ್ದಕ್ಕೆ, ಮುಖ ನೋಡಿಕೊಳ್ಳಬಾರದು ಅಂತ ಕನ್ನಡಿಗೆ ಕವರ್ ಹಾಕಿದ್ದೆವು. ನಾನು ಇದನ್ನು ಅಕ್ಸೆಪ್ಟ್ ಮಾಡುತ್ತೇನೆ, ಕವರ್ ತೆಗೆಯಿರಿ ಎಂದಿದ್ದರು. ಅವರ ಸರಳತೆ, ತಾಳ್ಮೆಯನ್ನು 40 ವರ್ಷಗಳಿಂದ ನೋಡುತ್ತಿದ್ದೇನೆ ಎಂದು ಬೇಸರಿಸಿದರು.
ಜುಲೈ 20ರಂದು ಮಧ್ಯಾಹ್ನ 2 ಗಂಟೆಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಸಮೀಪದ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ನಡೆಯಲಿದೆ. ಅಂತ್ಯಕ್ರಿಯೆಯನ್ನು ಇದೇ ಸ್ಥಳದಲ್ಲಿ ನಡೆಸಲು ಕಾರಣವೇನು ಎಂಬ ಪ್ರಶ್ನೆಗೆ ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.
ಚೆನ್ನಮ್ಮ ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ಈ ಭಾಗದಲ್ಲೇ ಕಳೆದಿದ್ದರು. ಸುತ್ತಮುತ್ತಲಿನ ಗ್ರಾಮಗಳ ಜನರೊಂದಿಗೆ ಅವರಿಗೆ ಆತ್ಮೀಯ ಬಾಂಧವ್ಯವಿತ್ತು. ಈ ಕಾರಣದಿಂದ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರ ಒಮ್ಮತದೊಂದಿಗೆ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದ್ದು, ಅದಕ್ಕೂ ಮುನ್ನ ಮನೆಯಲ್ಲಿ ನಡೆಯಬೇಕಾದ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗುತ್ತದೆ. ಈಗಾಗಲೇ ಅಂತ್ಯಸಂಸ್ಕಾರಕ್ಕೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದೆ.