

ಹಾಸನ: ನನ್ನ ಅಮ್ಮ ಚೆನ್ನಮ್ಮ ಕೊನೆಯ ದಿನಗಳಲ್ಲಿ ಪ್ರಜ್ವಲ್ ರೇವಣ್ಣರನ್ನು ನೋಡಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಬುಧವಾರ ಭಾವುಕರಾದರು.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ಕಳೆದ ಶನಿವಾರ ನಿಧನರಾಗಿದ್ದು, ಅವರ ಮೊಮ್ಮಗ, ಜೈಲು ಪಾಲಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಅಜ್ಜಿಯ ಅಂತಿಮ ದರ್ಶನ ಮಾಡಲು ಸಾಧ್ಯವಾಗಲಿಲ್ಲ. ಆದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಈ ಬಗ್ಗೆ ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ, ಹರದನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಹಲವು ಭಾವನಾತ್ಮಕ ವಿಚಾರಗಳನ್ನ ಹಂಚಿಕೊಂಡರು.
ಚೆನ್ನಮ್ಮ ಅವರು ಬಹುಶಃ ಇನ್ನೂ 3-4 ವರ್ಷಗಳ ಕಾಲ ಬದುಕುತ್ತಿದ್ದರು, ಈ ದಿನ ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಇದು ಆ ದೇವರು ತೀರ್ಮಾನ ಮಾಡಿರೋದು ನಾವಲ್ಲ. ದೇವರ ತೀರ್ಮಾನಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ. ಆದ್ರೆ ಅಮ್ಮ ಚೆನ್ನಮ್ಮ ಕೊನೆಯ ದಿನಗಳಲ್ಲಿ ಪ್ರಜ್ವಲ್ ರೇವಣ್ಣ ಅವರನ್ನ ನೋಡಬೇಕು ಎಂಬ ಆಸೆ ಇಟ್ಟುಕೊಂಡಿದ್ದರು ಎಂದು ಹೇಳಿದರು.
ಅಪ್ಪ, ಅಮ್ಮ ಸಂತೋಷ ಪಟ್ಟ ದಿನಗಳು ಕಡಿಮೆ
ಧಾರ್ಮಿಕವಾಗಿ ಎಲ್ಲಾ ವಿಧಿ ವಿಧಾನಗಳನ್ನ ಅತ್ಯಂತ ಶ್ರದ್ಧೆಯಿಂದ ನಡೆಸಿದ್ದೇವೆ. ನಮ್ಮ ತಂದೆ-ತಾಯಿ ಹಲವಾರು ರೀತಿಯ ಏಳು, ಬೀಳು ನೋವುಗಳನ್ನ ಕಂಡಿದ್ದಾರೆ. ಸಂತೋಷವಂತೂ ಅವರು ಪಟ್ಟಿಲ್ಲ, ಸಂತೋಷ ಪಟ್ಟ ದಿನಗಳು ಕಡಿಮೆ. ಎಲ್ಲರ ಬಗ್ಗೆ ಚಿಂತೆ ಮಾಡಿಕೊಂಡು ಬಂದವರು. ಮದುವೆಯಾದಾಗಿನಿಂದಲೂ ಆರೋಗ್ಯ ಸಮಸ್ಯೆ ಇತ್ತು. ಶಿವರಾತ್ರಿ ಹಬ್ಬದಂದು ಆಸಿಡ್ ಪ್ರಕರಣದಲ್ಲಿ ಅವರು ಬದುಕಿರುವುದೇ ಒಂದು ಪವಾಡ, 2 ತಿಂಗಳು ಪ್ರಜ್ಞೆ ಇರಲಿಲ್ಲ, ಹೋರಾಟ ಮಾಡಿ ಮರು ಜೀವ ಪಡೆದರು. ರಾಜರಾಜೇಶ್ವರಿ ತಾಯಿ ಆಶೀರ್ವಾದದಿಂದ ಉಳಿದರು, ರಾಜಕಾರಣದಲ್ಲಿ ಬಿಡುವು ಇಲ್ಲದಿದ್ದರೂ ಅವರಿಗೆ ನಮ್ಮ ತಂದೆ ಮಾನಸಿಕ ಧೈರ್ಯ ತುಂಬಿದ್ದಾರೆ ಎಂದು ತಿಳಿಸಿದರು.
ಕಳೆದ ಒಂದು ವರ್ಷದಿಂದ ನರಕಯಾತನೆ ಅನುಭವಿಸಿದ್ರು
ಕಳೆದ ಒಂದೂವರೆ ವರ್ಷದಿಂದ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಇದಕ್ಕೆ ಕಾರಣ ಈ ರಾಜ್ಯದಲ್ಲಿ ರಾಜಕೀಯ ದ್ವೇಷದಲ್ಲಿ ನಡೆದಿರುವ ಘಟನೆಗಳು. ಕೆಲವು ತಪ್ಪುಗಳು ಆಗಿರಬಹುದು, ನಾವು ಪರಿಶುದ್ಧವಾಗಿ ಬದುಕಿದ್ದೇವೆ ಎಂದು ಹೇಳಲ್ಲ. ಆ ತಪ್ಪುಗಳನ್ನು ಇಟ್ಟುಕೊಂಡು ಈ ರಾಜ್ಯದಲ್ಲಿ ಏನೇನು ನಡೆದಿದೆ. ನಮ್ಮ ಕುಟುಂಬವನ್ನು ಸಂಪೂರ್ಣವಾಗಿ ರಾಜ್ಯದ ಜನತೆಯ ಹೃದಯದಿಂದ ಕಿತ್ತೊಗೆಯಬೇಕು ಎಂದು ಕೆಲವು ಘಟನೆಗಳು ನಡೆದವು. ಅದನ್ನು ಈ ಸಂದರ್ಭದಲ್ಲಿ ಹೇಳಲು ಹೋಗಲ್ಲ, ಭವಿಷ್ಯ ಅವರು ಇನ್ನೂ ಬದುಕಿರುತ್ತಿದ್ದರು. ಆಸಿಡ್ ಪ್ರಕರಣ, ಮಾನಸಿಕವಾಗಿ ಯಾತನೆಗೆ ಒಳಗಾಗುವ ರೀತಿಯಲ್ಲಿ ಏನೇನು ನಡಿತು. ಎನ್ನುವುದನ್ನು ಮುಂದಿನ ದಿನಗಳಲ್ಲಿ ಯಾರಾದರೂ ಪುಸ್ತಕ ಬರೀತಾರೆ, ಅವರು ಒಂದೂವರೆ ವರ್ಷ ವರ್ಷದಿಂದ ಹಾಸಿಗೆ ಹಿಡಿದಿದ್ದರು. ಅಂದಿನಿಂದ ತುಂಬಾ ಹಿಂಸೆ ಪಟ್ಟಿದ್ದಾರೆ. ನರಕಯಾತನೆ ಅನುಭವಿಸಿದ್ರು. ನೆನಪಿನ ಶಕ್ತಿ ಕಡಿಮೆಯಾಯಿತು. ಯಾರನ್ನೂ ಗುರುತು ಹಿಡಿಯುತ್ತಿರಲಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಯಾರಾದ್ರೂ ಬಂದರೆ ಊಟ ಮಾಡಿದ್ದೀರಾ ಇಲ್ಲವೋ, ಊಟ ಮಾಡಿ ಎನ್ನುತ್ತಿದ್ದರು. ನನ್ನನ್ನು, ಇಬ್ಬರು ತಂಗಿಯರನ್ನು ನೆನಪಿನಲ್ಲಿಟ್ಟುಕೊಂಡಿದ್ದರು. ಒಳ್ಳೆಯ ಕೆಲಸ ಮಾಡಪ್ಪ ಎನ್ನುತ್ತಿದ್ದರು. ಆದರೆ ಒಂದೆರಡು ಬಾರಿ, ಕುಟುಂಬದಲ್ಲಿ ನಡೆದಿದ್ದ ಪ್ರಕರಣದಲ್ಲಿ ಯಾವಾಗ ಕರ್ಕಂಡು ಬರುತ್ತಿಯಾ ಎಂಬ ಮಾತು ಹೇಳುತ್ತಿದ್ದರು, ಇವತ್ತು ನನಗೆ ನೋವು ಇದೆ ಎಂದು ಭಾವುಕರಾದರು.