

ಮೈಸೂರು: ನೀವು ಈ ಜಿರಳೆಗಳನ್ನು ಇಟ್ಟುಕೊಂಡು ಕ್ರಾಂತಿ ಮಾಡ್ತೀವಿ ಅಂತಾ ಹೇಳಿ ವಾಂತಿ ಮಾಡ್ತಿದ್ದೀರಾ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ನೀಟ್ ಪರೀಕ್ಷೆ ಸಂಬಂಧಿತ ಪ್ರತಿಭಟನೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು ಮೋದಿ ಅವರು ಯಾರಿಗೂ ಸಲಾಂ ಹೊಡೆಯುತ್ತಿಲ್ಲ. ಅಮೆರಿಕಾದ ಏಕಸ್ವಾಮ್ಯತೆಗೆ ಸೆಡ್ದು ಹೊಡಿತಿದ್ದಾರೆ. ಅಂತ ಮೋದಿ ಅವರನ್ನು ಬಗ್ಗು ಬಡಿಯಬೇಕು ಎಂದು ಅಮೆರಿಕಾ ಯೋಚನೆ ಮಾಡುತ್ತಿದ್ದಾರೆ.
ದೇಶದ ಜನ ಮೋದಿ ಬೆನ್ನಿಗೆ ಇದ್ದಾರೆ, ನೀವು ಈ ಜಿರಳೆಗಳನ್ನು ಇಟ್ಟುಕೊಂಡು ಕ್ರಾಂತಿ ಮಾಡ್ತೀವಿ ಅಂತಾ ಹೇಳಿ ವಾಂತಿ ಮಾಡ್ತಿದ್ದೀರ, ಅವರನ್ನು ಯಾವ ರೀತಿ ಮಟ್ಟ ಹಾಕಬೇಕು ಎಂಬುದು ಮೋದಿ ಅವರಿಗೆ ಗೊತ್ತಿದೆ ಎಂದಿದ್ದಾರೆ.ಕಾಂಗ್ರೆಸ್ ನವರು ಜನರ ವೋಟು ತಗೊಂಡು ಅಧಿಕಾರಕ್ಕೆ ಬರೋದಕ್ಕೆ ಆಗೋದಿಲ್ಲ, ಅದಕ್ಕೆ ಅಮೆರಿಕಾದ ಏಜೆಂಟ್ ಆಗಿ ಈ ಪ್ರಯತ್ನಕ್ಕೆ ಕೈ ಹಾಕಿದ್ಜೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ದೇಶದ ಪ್ರತಿಯೊಬ್ಬರಿಗೂ ನೋವಿನ ಸಂಗತಿ ಎಂದು ಹೇಳಿದರೂ, ಈ ಪ್ರಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲವೆಂದು ಸ್ಪಷ್ಟಪಡಿಸಿದರು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕೇಂದ್ರ ಸರ್ಕಾರ ಈಗಾಗಲೇ ಕಠಿಣ ಕ್ರಮ ಕೈಗೊಂಡಿದ್ದು, ತಪ್ಪಿತಸ್ಥರನ್ನ ಪತ್ತೆಹಚ್ಚಿ ಜೈಲಿಗೆ ಕಳುಹಿಸುವ ಕಾರ್ಯ ನಡೆದಿದೆ ಎಂದು ಅವರು ಹೇಳಿದರು. ಅಕ್ರಮ ಎಸಗಿದವರ ವಿರುದ್ಧ ಯಾವುದೇ ರಾಜಿ ಇಲ್ಲದೆ ಕ್ರಮ ಜರುಗಿಸಲಾಗುತ್ತಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.
ಈ ವೇಳೆ ಕಾಂಗ್ರೆಸ್ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು. "ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಅನೇಕ ಹಗರಣಗಳು ನಡೆದಿದ್ದವು. ಆಗ ಇಷ್ಟೊಂದು ಆಕ್ರೋಶ ವ್ಯಕ್ತವಾಗಿರಲಿಲ್ಲ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ಲೋಪ ನಡೆದರೂ ಅದನ್ನ ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ" ಎಂದು ಆರೋಪಿಸಿದರು.