

ಬೆಂಗಳೂರು: ಮುಲ್ಲಾ ಅಂದ್ರೆ ಮುಸ್ಲಿಂ ಅಲ್ಲ. ಹೀಗಂತ ಗೂಗಲ್ ನಲ್ಲಿ ನಾನು ನೋಡಿದ್ದೇನೆ ಎಂದು ವಿಧಾನಪರಿಷತ್ ಬಿಜೆಪಿ ಶಾಸಕ ಸಿಟಿ ರವಿ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಸೋಮವಾರ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿ ಹೈದರ ಗ್ರಾಮದಲ್ಲಿ ಮಾತನಾಡಿ, ಮುಲ್ಲಾ ಅಂದ್ರೆ ಮುಸ್ಲಿಂ ಸಮುದಾಯ ಅಲ್ಲ. ಮುಲ್ಲಾ ಅಂದ್ರೆ ಮುಸ್ಲಿಂ ಅಲ್ಲ ಅಂತಾ ಗೂಗಲ್ನಲ್ಲಿ ನೋಡಿದ್ದೇನೆ. ಮುಲ್ಲಾನಿನೂ ನೀಟ್ಗೂ ಏನು ಸಂಬಂಧ ಅಂತಾ ಮಾತನಾಡಿದ್ದೇನೆ ಎಂದು ನನ್ನ ಹೇಳಿಕೆಯನ್ನು ಅಪಾರ್ಥ ಮಾಡಲಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.
ಶಾಲೆಯಲ್ಲಿ ಮೇಷ್ಟ್ರು ಕೂಡ ಎದೆ ಸೀಳಿದರೆ ಅಕ್ಷರ ಇಲ್ಲ ಎನ್ನುತ್ತಾರೆ. ಹಾಗಾದರೆ ಮೇಷ್ಟ್ರನ್ನೂ ಕಾಂಗ್ರೆಸ್ಸಿಗರು ಜೈಲಿಗೆ ಹಾಕ್ತಾರಾ? ಎಂದು ಅವರು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನಿಸಿದರು.
ನನ್ನ ವಿರುದ್ಧ ಸುಳ್ಳು ದೂರು ಆಧರಿಸಿ ಬಂಧಿಸಲು ಹೊರಟರೆ ನಾನು ಅದಕ್ಕೆ ಸಿದ್ಧನಿದ್ದೇನೆ. ನಾನೇನು ಭಯೋತ್ಪಾದಕನಲ್ಲ. ಬದಲಾಗಿ, ಸಾರ್ವಜನಿಕ ಜೀವನದಲ್ಲಿ ಇರುವವನು. ಸತ್ಯ ಹೇಳುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ ಎಂದರು.
ನಾನು ಹಿಂದುತ್ವದ ಪರ, ಅನ್ಯಾಯದ ವಿರುದ್ಧ ಹೋರಾಟ ನಡೆಸಿ ಜೈಲಿಗೆ ಹೋಗುವುದಕ್ಕೂ ಸಿದ್ಧನಾಗಿದ್ದೇನೆ. ನನಗೆ ಜನತಾ ನ್ಯಾಯಾಲಯ ಹಾಗೂ ಪ್ರಜಾಪ್ರಭುತ್ವದ ನ್ಯಾಯಾಲಯವೇ ಅಂತಿಮ ಎಂದು ತಿರುಗೇಟು ನೀಡಿದ್ದರು.
ವಿಡಿಯೋಗಳಲ್ಲಿ ಒಬ್ಬ ಮುಲ್ಲಾ ನಡೆದುಕೊಂಡ ರೀತಿಯನ್ನು ಟೀಕಿಸಿದ್ದೆ. ಆದರೆ, ಅವರು ಇದನ್ನು ಇಡೀ ಮುಸ್ಲಿಂ ಸಮುದಾಯಕ್ಕೆ ಹೇಳಿದ್ದಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆ ರೀತಿಯಲ್ಲಿ ಹರಿಯಬಿಟ್ಟು, ಮುಸ್ಲಿಮರನ್ನು ನನ್ನ ವಿರುದ್ಧ ಎತ್ತಿಕಟ್ಟುವ ಯತ್ನ ಮಾಡಿದ್ದಾರೆ. ಈ ಕುರಿತಾಗಿ ಜಾಮೀಯಾ ಮಸೀದಿ ಅಧ್ಯಕ್ಷ ಮುದಾಸೀರ್ ಪಾಷಾ ವಿರುದ್ಧ ದೂರು ನೀಡಿದ್ದೇನೆ ಎಂದು ಇದೇ ವೇಳೆ ಹೇಳಿದರು.
ನೀಟ್ ಪ್ರತಿಭಟನೆಯ ಸಂದರ್ಭದಲ್ಲಿ ಘಟನೆಯೊಂದನ್ನು ಉಲ್ಲೇಖಿಸಿ' ಮುಲ್ಲಾಗಳ ಎದೆ ಸೀಳಿದ್ರೆ 3 ಅಕ್ಷರವಿಲ್ಲ' ಎಂದು ಸಿಟಿ ರವಿ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಅವರು ಸಮರ್ಥನೆ ಮಾಡಿಕೊಂಡರು.