

ನವದೆಹಲಿ: ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಬೆಂಗಳೂರು ಕಸದ ಮಾಫಿಯಾ ಗ್ಯಾಂಗಿನ ಏಜೆಂಟರಾಗಿ ಮಾತನಾಡುತ್ತಿದ್ದಾರೆ. ಈ ಮಾಫಿಯಾ ನಿಯಂತ್ರಿಸಬೇಕು ಎಂದು ನಾನು ಈ ಹಿಂದೆ ಅವರೊಂದಿಗೆ ಚರ್ಚೆ ಮಾಡಿದ್ದೆ. ಈಗ ಅಶೋಕ್ ಅವರು ಮಾಫಿಯಾದ ವಕ್ತಾರರಾಗಿರುವುದು ನನಗೆ ಆಶ್ಚರ್ಯವಾಗಿದೆ ಎಂದು ಸಿಎಂ ಡಿ.ಕೆ ಶಿವಕುಮಾರ್ ಅವರು ತಿರುಗೇಟು ನೀಡಿದರು.
ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಕಸದ ಟೆಂಡರ್ ನಲ್ಲಿ 10 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ, ಅವರಿಗೆ ಏನೇನು ಕಸ ಬೇಕೋ ಲಾರಿಯಲ್ಲಿ ತುಂಬಿ ಕಳುಹಿಸಿಕೊಡೋಣ. ಈ ಹಿಂದೆ ಕುಮಾರಸ್ವಾಮಿ ಅವರು ಇದನ್ನೇ ಮಾತನಾಡಿದ್ದರು. ಬೆಂಗಳೂರಿನಲ್ಲಿ ದೊಡ್ಡ ಕಸದ ಲಾಭಿ ಇದೆ.
ಅವರ ಕಾಲದಲ್ಲಿ ಯಾಕೆ ಕಸದ ಟೆಂಡರ್ ಮಾಡಲು ಆಗಲಿಲ್ಲ? ಈ ಹಿಂದೆ 14-15 ಜನರಿಗೆ ಕಸದಿಂದ ಇಂಧನ ಉತ್ಪಾದನೆಗೆ ಅವಕಾಶ ನೀಡಿದ್ದೆವು. ಒಬ್ಬರೂ ಯಶಸ್ವಿಯಾಗಿರಲಿಲ್ಲ. ನಾನು ಈ ನಿರ್ಧಾರ ಕೈಗೊಳ್ಳುವ ಮುನ್ನ ದೆಹಲಿ, ಹೈದರಾಬಾದ್, ಚೆನ್ನೈ ಗೆ ಹೋಗಿ ನೋಡಿದ್ದೇನೆ” ಎಂದು ತಿಳಿಸಿದರು.
ಈಗ ಕಸ ವಿಲೇವಾರಿಗೆ 6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಾರೆ. ನಮ್ಮಲ್ಲಿ ಎಲ್ಲೂ ಜಾಗ ಲಭ್ಯವಾಗಲಿಲ್ಲ. ಹೀಗಾಗಿ ದೊಡ್ಡಬಳ್ಳಾಪುರದಲ್ಲಿ ಜಾಗ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಇನ್ನು ನೈಸ್ ಬಿಟ್ಟಿರುವ ಜಾಗ ಪಡೆದಿದ್ದೇವೆ. ಬೇರೆ ಕಡೆ ಯಾರಾದರೂ ಜಾಗ ಕೊಡಲು ಸಿದ್ಧರಿದ್ದರೆ ಮುಂದೆ ಬನ್ನಿ ಎಂಬ ಕರೆಯನ್ನು ನೀಡಿದ್ದೇನೆ.
ಲಿಂಬಾವಳಿ ಅವರು ಕಸ ಸಾಗಿಸುವುದನ್ನೇ ನಿಲ್ಲಿಸಿದ್ದರು. ನಾವು ಶಾಸಕರ ಒತ್ತಡದ ಮೇರೆಗೆ 800 ಕೋಟಿ ಅನುದಾನ ನೀಡಿದ್ದೇವೆ. ಕಸದಿಂದ ಗ್ಯಾಸ್ ಹಾಗೂ ವಿದ್ಯುತ್ ಉತ್ಪಾದನೆ ಆಗಬೇಕು. ಅವರು ಯಾವ ತನಿಖೆ ಬೇಕಾದರೂ ಮಾಡಲಿ. ಎಲ್ಲಾದರೂ ವರದಿ ನೀಡಲಿ. 36 ಸಾವಿರ ಕೋಟಿ ಅಲ್ಲ, ಕೇವಲ 10 ಕೋಟಿ ಹಣ ದುರ್ಬಳಕೆಯಾದರೂ ತನಿಖೆ ಮಾಡಿಸಲಿ, ಎದುರಿಸಲು ನಾನು ಸಿದ್ಧ ಎಂದರು.
Advertisement