

ಬೆಂಗಳೂರು: ರಾಜಕೀಯವಾಗಿ ನಮಗೆ ಯಾರ ಮೇಲೆಯೂ ಭಯವಿಲ್ಲ, ಬದಲಾಗಿ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೇ ಪ್ರಸ್ತುತ ಪರಿಸ್ಥಿತಿಯಲ್ಲಿ ತೀವ್ರ ಭಯ ಪಡಬೇಕಾಗಿದೆ ಎಂದು ಪ್ರದೀಪ್ ಈಶ್ವರ್ ಲೇವಡಿ ಮಾಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಕುಮಾರಸ್ವಾಮಿ ಅವರ ಪಾಳಯದಲ್ಲಿರುವ ಪ್ರಮುಖ ನಾಯಕರು ಮತ್ತು ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಅವರೆಲ್ಲರೂ ಕಾಂಗ್ರೆಸ್ ಪಕ್ಷದ ಕಡೆಗೆ ಬರಲಿದ್ದಾರೆ ಎಂದು ಬಾಂಬ್ ಸಿಡಿಸಿದರು.
ಹೀಗಾಗಿ ಸ್ವಪಕ್ಷದ ಶಾಸಕರನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಅವರು ತಂತ್ರ ಹುಡುಕಬೇಕೇ ಹೊರತು, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ನಾವು ಯಾವುದೇ ದುರುದ್ದೇಶದಿಂದ ಮಾತನಾಡುತ್ತಿಲ್ಲ, ಕೇವಲ ಆರ್ಎಸ್ಎಸ್ ಸಂಘಟನೆಯ ಅಧಿಕೃತ ದಾಖಲೆಗಳನ್ನು ಮಾತ್ರ ಕೇಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿರುವ ಅವರು, ಪ್ರಿಯಾಂಕ್ ಖರ್ಗೆ ಅವರ ನಿಲುವಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು. ಬಿಜೆಪಿ ನಾಯಕರಾದ ಸುನೀಲ್ ಅಣ್ಣ ,ಅಶೋಕಣ್ಣ ಅವರುಗಳು ಬಾಯಿಗೆ ಬಂದಾಗೆ ಮಾತಾಡ್ತಾರೆ, ಟ್ವೀಟ್ ಮಾಡ್ತಾರೆ. ವಿರೋಧ ಪಕ್ಷದ ನಾಯಕರಿಗೆ ತಾಕತ್ತಿದ್ದರೆ ಆರ್ಎಸ್ಎಸ್ ಸಂಘಟನೆಯ ಅಧಿಕೃತ ನೋಂದಣಿ ಪ್ರತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಿ ಎಂದು ನೇರ ಸವಾಲು ಹಾಕಿದ್ದಾರೆ.
ಒಂದು ಕಡೆ ದೇಶದಲ್ಲಿ ದೊಡ್ಡದಾಗಿ ಸಂಘಟನೆ ಇದೆ ಎಂದು ಹೇಳಿಕೊಳ್ಳುವ ಇವರು, ಮತ್ತೊಂದು ಕಡೆ ಸರ್ಕಾರಕ್ಕೆ ಯಾವುದೇ ರೀತಿಯ ತೆರಿಗೆಯನ್ನು ಕಟ್ಟುವುದಿಲ್ಲ ಎಂದರೆ ಅದು ಯಾವ ನ್ಯಾಯ. ನಿಯಮಾವಳಿಗಳ ಪ್ರಕಾರ ನೋಂದಣಿಯಾಗದೆ, ತೆರಿಗೆ ವ್ಯಾಪ್ತಿಗೆ ಬರದೇ ಇರುವ ಇಂತಹ ಸಂಘಟನೆಯ ಮುಖ್ಯಸ್ಥರಿಗೆ ಕೇಂದ್ರ ಸರ್ಕಾರವು ಯಾವ ಆಧಾರದ ಮೇಲೆ ಅತ್ಯುನ್ನತ ಝೆಡ್ ಪ್ಲಸ್ (Z+) ಸುರಕ್ಷತೆಯನ್ನು ಒದಗಿಸಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಕೇವಲ ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಮಾತನಾಡುವ ಬಿಜೆಪಿ ನಾಯಕರು, ತಾವು ನಿಜವಾಗಿಯೂ ಕಾನೂನಿಗೆ ಬದ್ಧರಾಗಿದ್ದರೆ ನಿಮಗೆ ತಾಕತ್ ಇದ್ರೆ ಮೊದಲು ಆರ್ಎಸ್ಎಸ್ಗೆ ಸಂಬಂಧಿಸಿದ ಕಾನೂನಾತ್ಮಕ ದಾಖಲೆಗಳನ್ನು ಸಾರ್ವಜನಿಕರ ಮುಂದೆ ಇಡಲಿ ಎಂದಿದ್ದಾರೆ.
Advertisement