

ಬೆಂಗಳೂರು: 2026ನೇ ಸಾಲಿನ ಪದ್ಮಶ್ರೀ ಪುರಸ್ಕೃತ, ಕನ್ನಡಿಗ ಮಂಡ್ಯದ ಅಂಕೇಗೌಡರ ಕನಸಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉತ್ತಮ ಉಡುಗೊರೆ ನೀಡಿದ್ದಾರೆ.
ಅಂಕೇಗೌಡರು ಸಂಗ್ರಹಿಸಿರುವ ಅಪರೂಪದ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ರಕ್ಷಣೆ ಹಾಗೂ ಹೈಟೆಕ್ ಗ್ರಂಥಾಲಯ ನಿರ್ಮಾಣಕ್ಕಾಗಿ ಸರ್ಕಾರದ ವತಿಯಿಂದ 5 ಕೋಟಿ ರೂಪಾಯಿ ಅನುದಾನ ಮತ್ತು 2 ಎಕರೆ ಜಮೀನು ನೀಡಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಂದು ಮಹತ್ವದ ಆದೇಶ ಹೊರಡಿಸಿದ್ದಾರೆ.
ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಅಂಕೇಗೌಡರು
ಇಂದು ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪದ್ಮಶ್ರೀ ಪುರಸ್ಕೃತ ಅಂಕೇಗೌಡರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸೌಜನ್ಯದ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅಂಕೇಗೌಡರು ತಮ್ಮ "ಪುಸ್ತಕ ಮನೆ"ಯ ಇತಿಹಾಸ ಹಾಗೂ ಅಲ್ಲಿರುವ ಲಕ್ಷಾಂತರ ಜ್ಞಾನದ ಭಂಡಾರವನ್ನು ಸಂರಕ್ಷಿಸಲು ಎದುರಿಸುತ್ತಿರುವ ಸವಾಲುಗಳನ್ನು ಮುಖ್ಯಮಂತ್ರಿಗಳ ಮುಂದೆ ವಿವರಿಸಿದರು.
ಅಂಕೇಗೌಡರ ಅಪ್ರತಿಮ ಸಾಹಿತ್ಯ ಸೇವೆ ಹಾಗೂ ಜ್ಞಾನದ ದಾಹವನ್ನು ಮನಗಂಡ ಮುಖ್ಯಮಂತ್ರಿಗಳು ತಕ್ಷಣವೇ ಅವರು ಸಲ್ಲಿಸಿದ ಮನವಿ ಪತ್ರದಲ್ಲಿ ಬೃಹತ್ ಗ್ರಂಥಾಲಯದ ಅಭಿವೃದ್ಧಿಗೆ ಅಗತ್ಯವಿರುವ ಭೂಮಿ ಮತ್ತು ಆರ್ಥಿಕ ನೆರವನ್ನು ಘೋಷಿಸಿ ಸಹಿ ಮಾಡಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಅಂಕೇಗೌಡರ ಭೇಟಿ, ಸೌಜನ್ಯದ ಮಾತುಕತೆಯನ್ನು ಸಿಎಂ ಡಿ ಕೆ ಶಿವಕುಮಾರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಶ್ವಮಾನವ ಕುವೆಂಪು ಅವರು ತಮ್ಮ ಆತ್ಮಕಥೆ ʻನೆನಪಿನ ದೋಣಿಯಲ್ಲಿʼ ಅವರು ಮೊದಲ ಬಾರಿಗೆ ಗ್ರಂಥಾಲಯಕ್ಕೆ ಭೇಟಿ ನೀಡಿದಾಗ ಆದ ಅನುಭವವನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟದ್ದನ್ನು ಸ್ಮರಿಸಿ ಬರೆದಿದ್ದಾರೆ. ಕುವೆಂಪುರವರ ಜ್ಞಾನದ ಹಸಿವಿನ ವರ್ಣನೆ ಹೀಗಿದೆ:
“ವಿಪುಲೈಶ್ವರ್ಯಮಯಿಯಾದ ಸಾಕ್ಷಾತ್ ತಾಯಿ ಸರಸ್ವತೀದೇವಿಯೆ, ಸೆರಗು ಓಸರಿಸಿ, ಸ್ವರ್ಣ ಕಲಶಸದೃಶ್ಯಗಳಾದ ತನ್ನ ದುಗ್ದಪೀನ ಪಯೋಧರಗಳನ್ನು ತನ್ನ ಮುಗ್ಧ ಕವಿನಂದನ ಮುಂದೆ ಚಾಚಿ ನಿಂತಂತಿತ್ತು, ‘ಬಾ ಪೀಯುಷ ಪಾನಗೈ’
ಹೀಗೆ ಓದಿನ ಜ್ಞಾನದ ದಾಸೋಹವನ್ನು ಲಕ್ಷಾಂತರ ಪುಸ್ತಕಗಳ ಸಂಗ್ರಹದ ಮೂಲಕ ನಾಡಿಗೆ ಉಣಬಡಿಸುತ್ತಿರುವ ಮಹಾನ್ ಚೇತನ, ಪದ್ಮಶ್ರೀ ಪುರಸ್ಕೃತರು ಹಾಗೂ ‘ಪುಸ್ತಕ ಮನೆ’ಯ ರೂವಾರಿಗಳಾದ ಅಂಕೇಗೌಡ ಎಂ. ಅವರು ಇಂದು ವಿಧಾನಸೌಧದಲ್ಲಿ ನನ್ನನ್ನು ಭೇಟಿಯಾಗಿ ಸಮಾಲೋಚಿಸಿದರು. ಪುಸ್ತಕ ಲೋಕದ ಈ ಅನನ್ಯ ಸಾಧಕರೊಂದಿಗಿನ ಭೇಟಿ ಅತ್ಯಂತ ಅರ್ಥಪೂರ್ಣವಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಯಾರು ಈ ಅಂಕೇಗೌಡರು?
ಮಂಡ್ಯದ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯಲ್ಲಿರುವ 'ಪುಸ್ತಕದ ಮನೆ'ಯನ್ನು ಸಾರ್ವಜನಿಕರ ಓದಿಗೆ ತೆರೆದಿಟ್ಟಿರುವ ಎಂ. ಅಂಕೇಗೌಡರು, ಸುಮಾರು ನಾಲ್ಕು ಲಕ್ಷ ಪುಸ್ತಕಗಳು, ನಾಣ್ಯ, ಅಂಚೆ ಚೀಟಿ ಮತ್ತು ಲಗ್ನಪತ್ರಿಕೆಗಳ ಅಪರೂಪದ ಸಂಗ್ರಹವನ್ನು ಹೊಂದಿದ್ದಾರೆ.
ಎಂ. ಅಂಕೇಗೌಡರು ಪಾಂಡವಪುರ ತಾಲ್ಲೂಕಿನ ಚಿನಕುರಳಿಯಲ್ಲಿ ಜನಿಸಿದವರು. ಮೈಸೂರು ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಸೇರಿ, ಸಂಜೆ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು. ಬಳಿಕ, ಅಂಚೆ ಮತ್ತು ತೆರಪಿನ ಮೂಲಕ ಕನ್ನಡದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಸಕ್ಕರೆ ಕಾರ್ಖಾನೆಯಲ್ಲಿ ವೇಳಾಧಿಕಾರಿಯಾಗಿ ದುಡಿಯುತ್ತಿದ್ದಾಗ, ತಮ್ಮ ಸಂಬಳದ ಹೆಚ್ಚಿನ ಹಣವನ್ನು ಪುಸ್ತಕ ಕೊಳ್ಳುವುದಕ್ಕೇ ಬಳಸುತ್ತಿದ್ದರು. ಪುಸ್ತಕಗಳ ಸಂಗ್ರಹಕ್ಕಾಗಿ ತಮ್ಮ ನಿವೇಶನವನ್ನೂ ಮಾರಾಟ ಮಾಡಿದ್ದರಂತೆ.
ತಮ್ಮ ಸಂಬಳದ ಬಹುಪಾಲು ಪುಸ್ತಕಗಳಿಗೇ ಮೀಸಲಿಟ್ಟು, ಪುಸ್ತಕ ಸಂಗ್ರಹಕ್ಕಾಗಿ ನಿವೇಶನವನ್ನೂ ಮಾರಿದ ಅಂಕೇಗೌಡರು, ಗ್ರಾಮೀಣ ಪ್ರದೇಶದ ಪುಸ್ತಕ ಪ್ರಿಯರಿಗೆ ಸ್ಫೂರ್ತಿಯಾಗಿದ್ದಾರೆ.
Advertisement