

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆ(AI) ವಲಯವನ್ನು ಮತ್ತಷ್ಟು ಬಲಪಡಿಸಲು, ಪ್ರಸಕ್ತ ವರ್ಷದಲ್ಲೇ ಐಐಎಸ್ಸಿ ಅಡಿಯಲ್ಲಿ AI ಮತ್ತು ರೊಬೊಟಿಕ್ಸ್ ತಂತ್ರಜ್ಞಾನ ಪಾರ್ಕ್ ಸ್ಥಾಪನೆ, "ಬೆಂಗಳೂರು ರೊಬೊಟಿಕ್ಸ್ ಮತ್ತು AI ಇನ್ನೋವೇಶನ್ ಜೋನ್" ಎಂಬ ರೊಬೊಟಿಕ್ಸ್ ಮತ್ತು AI ಕ್ಯಾಂಪಸ್ ಅನ್ನು ಸ್ಥಾಪಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು, ರೊಬೊಟಿಕ್ಸ್ ಮತ್ತು AI ಕ್ಯಾಂಪಸ್ ಅನ್ನು ಇಸ್ರೋ ಮತ್ತು ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ಲಿಮಿಟೆಡ್(ಕಿಯೋನಿಕ್ಸ್) ಸಹಯೋಗದೊಂದಿಗೆ ಸ್ಥಾಪಿಸಲಾಗುವುದು ಎಂದರು.
ರಾಯಚೂರಿನ ಐಐಐಟಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ AI ಗಾಗಿ ಎಕ್ಸಲೆನ್ಸ್ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.
ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ನೀತಿಯನ್ನು ಪರಿಚಯಿಸಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಸರ್ಕಾರದ ಪ್ರಗತಿಪರ ನೀತಿಗಳ ಪರಿಣಾಮವಾಗಿ, ಪ್ರಸ್ತುತ ರಾಜ್ಯದಲ್ಲಿ 550 ಕ್ಕೂ ಹೆಚ್ಚು ಜಿಸಿಸಿಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
"ಈ ನೀತಿಯಡಿಯಲ್ಲಿ, 2029 ರ ವೇಳೆಗೆ ರಾಜ್ಯದಲ್ಲಿ 500 ಹೊಸ ಜಿಸಿಸಿಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದ್ದು, ಇದು 3.5 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ ಎಂದರು.
ಕಿಯೋನಿಕ್ಸ್ ನಿಂದ ಜಿಸಿಸಿಯನ್ನು ಉತ್ತೇಜಿಸಲು ಮಂಗಳೂರಿನಲ್ಲಿ ಹೊಸ ಐಟಿ ಪಾರ್ಕ್ ಅನ್ನು ಸ್ಥಾಪಿಸಲಾಗುವುದು" ಎಂದು ಸಿಎಂ ಹೇಳಿದರು.
ಐಟಿ ವಲಯಕ್ಕೆ ನೀಡಲಾಗುವ ಬೆಂಬಲದೊಂದಿಗೆ, ಮೈಸೂರಿನ 100 ಕಂಪನಿಗಳಲ್ಲಿ 30,000 ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಹೇಳಿದರು.
ಬೆಂಗಳೂರಿನಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಬೆಂಗಳೂರಿನಾಚೆ ಆರ್ಥಿಕ ಚಟುವಟಿಕೆಗಳನ್ನು ಬಲಪಡಿಸಲು, ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ನಗರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.
Advertisement