

ಬೆಂಗಳೂರು: ಕಳೆದ ವರ್ಷ ಜೂನ್ 4ರಂದು ಎಂ. ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ನಡೆದ ತುಳಿತದ ದುರಂತಕ್ಕೆ ಇನ್ನೂ ಒಂದು ವರ್ಷವೂ ಪೂರ್ತಿಯಾಗಿಲ್ಲ. ಆ ಘಟನೆಯಲ್ಲಿ 11 ಮಂದಿ ಮೃತಪಟ್ಟು, 33ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಈ ವರ್ಷ ಮಾರ್ಚ್ನಲ್ಲಿ ಅದೇ ಸ್ಟೇಡಿಯಂನಲ್ಲಿ ಐಪಿಎಲ್ ಮೊದಲ ಪಂದ್ಯವನ್ನು ಆಯೋಜಿಸಲಾಗಿದೆ. ಆದರೆ ಮೃತರ ಪೋಷಕರು ಇನ್ನೂ ತಮ್ಮ ಸಾಮಾನ್ಯ ಜೀವನಕ್ಕೆ ಮರಳಲು ಸಾಧ್ಯವಾಗದೆ, ಮಕ್ಕಳನ್ನು ಕಳೆದುಕೊಂಡ ನೋವಿನಿಂದ ಹೊರಬರಲು ಹೋರಾಟ ನಡೆಸುತ್ತಿದ್ದಾರೆ.
ಮೃತರಾದ 11 ಮಂದಿಯಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಉದ್ಯೋಗದಲ್ಲಿದ್ದ ಯುವಕರು ಇದ್ದರು. ತಮ್ಮ ಪ್ರಿಯ ಕ್ರಿಕೆಟ್ ಆಟಗಾರರನ್ನು ನೋಡಲು ಅವರು ಸ್ಟೇಡಿಯಂಗೆ ಬಂದಿದ್ದರು.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಜೊತೆ ಮಾತನಾಡಿದ ದಿವ್ಯಾಂಶಿ ಬಿಎಸ್ (14ವ) ಅವರ ತಾಯಿ ಆಶ್ವಿನಿ ಯುಎಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ನನ್ನ ಮಗಳನ್ನು ವಾಪಸ್ ಕೊಡಲು ಸಾಧ್ಯವಾಗುತ್ತದೆಯೇ ಅಥವಾ ನನಗೆ ನ್ಯಾಯ ದೊರಕಿಸಬಹುದೇ? ಈ 11 ಮಂದಿಯ ಸಾವಿಗೆ ಯಾರು ಹೊಣೆ ಹೊರುತ್ತಾರೆ, ಸರ್ಕಾರಕ್ಕೆ ಸ್ವಲ್ಪವಾದರೂ ಮನಸ್ಸಿದ್ದರೆ, ಇದೇ ಸ್ಥಳದಲ್ಲಿ ಮತ್ತೆ ಪಂದ್ಯ ಆಯೋಜಿಸುತ್ತಿರಲಿಲ್ಲ. ಸ್ಮಾರಕ ನಿರ್ಮಿಸಿದ್ದಾರೆ, ಕುರ್ಚಿಗಳನ್ನು ಇಟ್ಟಿದ್ದಾರೆ — ಆದರೆ ಎಷ್ಟು ಕುಟುಂಬಗಳಿಗೆ ಇದರ ಮಾಹಿತಿ ಇದೆ ನಾವು ಇನ್ನೂ ದುಃಖದಲ್ಲೇ ಇದ್ದೇವೆ ಎಂದರು.
ದಿವ್ಯಾಂಶಿ ಧರಿಸಿದ್ದ ಚಿನ್ನದ ಬಳೆಗಳು ಮತ್ತು ಕಿವಿಯೋಲೆಗಳು ಸಿಕ್ಕಿವೆಯೇ ಎಂದು ಕೇಳಿದಾಗ, ಇಲ್ಲ, ಆಕೆಯ ಮೃತದೇಹವನ್ನು ಆಸ್ಪತ್ರೆಗೂ ಕರೆದೊಯ್ಯುವಾಗ ಯಾರು ತೆಗೆದುಕೊಂಡರು ಎಂಬುದೇ ಗೊತ್ತಿಲ್ಲ. ಇದರ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದರು.
ಚಿನ್ಮಯ ಶೆಟ್ಟಿ (19ವ) ಅವರ ತಂದೆ ಕರುಣಾಕರ್ ಶೆಟ್ಟಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಘಟನೆಯ ನಂತರ ಪ್ರಕರಣವನ್ನು ಸಿಐಡಿಗೆ ನೀಡಿದರು. ಅಧಿಕಾರಿಗಳು ಎಲ್ಲರ ಜೊತೆ ಮಾತನಾಡಿದರು, ಆದರೆ ನನ್ನೊಂದಿಗೆ ಮಾತ್ರ ಮಾತನಾಡಲಿಲ್ಲ. ಅವರು ಹಲವು ಬಾರಿ ಕರೆದರೂ ನಾನು ಹೋಗಲಿಲ್ಲ. ಮತ್ತೆ ಕೇಳಿದಾಗ ಪರಿಶೀಲನೆಗೆ ಏನು ಪ್ರಯೋಜನ ಅಂತಿಮವಾಗಿ ಸರ್ಕಾರಕ್ಕೆ ಕ್ಲೀನ್ ಚಿಟ್ ಸಿಗುತ್ತದೆ ಎಂದೆ. ಅದೇ ಆಗಿದೆ. ನಾವು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
ಚಿನ್ಮಯ ಅವರು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದರು. ಅವರು ತರಗತಿಯಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದು, ಯಕ್ಷಗಾನ ಕಲಾವಿದ, ಬಾಸ್ಕೆಟ್ಬಾಲ್ ಆಟಗಾರ ಮತ್ತು ಭರತನಾಟ್ಯ ನೃತ್ಯಗಾರರಾಗಿದ್ದರು.
ಭೂಮಿಕ್ (19ವ) ಅವರ ತಂದೆ ಲಕ್ಷ್ಮಣ್ ಡಿ.ಹೆಚ್ ತಮ್ಮ ಮಗನನ್ನು ನೆನೆದು ಭಾವುಕರಾಗುತ್ತಾರೆ. ನಾನು ಪ್ರತಿದಿನ ನನ್ನ ಮಗನನ್ನು ನೆನಪಿಸಿಕೊಳ್ಳುತ್ತೇನೆ; ಅವನನ್ನು ಕಳೆದುಕೊಂಡ ನಂತರ ನಮಗೆ ಬೆಲೆ ಗೊತ್ತಾಗಿದೆ. ಸರ್ಕಾರಕ್ಕೆ ಈ 11 ಜೀವಗಳ ಮೌಲ್ಯ ತಿಳಿದಿದ್ದರೆ, ಇದೇ ಸ್ಥಳದಲ್ಲಿ ಪಂದ್ಯ ನಡೆಸುತ್ತಿರಲಿಲ್ಲ. ನಮಗೆ ಪರಿಹಾರ ಹಣ ಕೊಟ್ಟಿದ್ದಾರೆ, ಆದರೆ ಅದು ಜೀವಕ್ಕೆ ಸಮನಾಗುವುದಿಲ್ಲ. ಇನ್ನೂ ಹೆಚ್ಚು ನೋವು ಕೊಡುವುದು ಏನೆಂದರೆ, ಆರ್ಸಿಬಿಯಿಂದ ಇಂದಿಗೂ ಒಂದು ಕರೆ ಕೂಡ ಬಂದಿಲ್ಲ ಎಂದರು.
Advertisement