

ಬೆಂಗಳೂರು: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ಅಂತಾರಾಷ್ಟ್ರೀಯ ಸಂಬಂಧಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ವಿರುದ್ಧ ಇಂದು ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿ ಲೀಟರ್ಗೆ 3 ರೂಪಾಯಿ ಇಂಧನ ದರ ಹೆಚ್ಚಿಸಿರುವ ಕೇಂದ್ರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ಸಾಮಾನ್ಯ ಜನರು ಅಗತ್ಯ ಬಳಕೆಯನ್ನು ಕಡಿಮೆ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದರು. ಜಾಗತಿಕ ಸಂಘರ್ಷಗಳಿಂದ ಉಂಟಾದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಮೋದಿ ಅವರು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ವಿಫಲರಾಗಿದ್ದಾರೆ. ಅವರು ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲಿಲ್ಲ, ಸಹಾಯ ಮಾಡಲಿಲ್ಲ. ಕೋವಿಡ್ ಸಮಯದಲ್ಲಿ ಹೇಗೆ ಗಂಟೆ ಬಾರಿಸಿ, ದೀಪ ಹಚ್ಚಿ ಎಂದು ಹೇಳುತ್ತಿದ್ದರು, ಈಗಲೂ ಅದೇ ರೀತಿ ಹೇಳುತ್ತಿದ್ದಾರೆ. ಇದು ಸಾಧ್ಯವೇ? ನನ್ನ ಮನೆಯಲ್ಲಿ ತೈಲ ಬಳಕೆಯನ್ನು ಹೇಗೆ ನಿಲ್ಲಿಸಲಿ ವಾಹನ ಬಳಕೆಯನ್ನು ಹೇಗೆ ನಿಲ್ಲಿಸಲಿ” ಎಂದು ಶಿವಕುಮಾರ್ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
ಇಂಧನ ಸಂರಕ್ಷಣೆ ಮತ್ತು ವೈಯಕ್ತಿಕ ಬಳಕೆಗೆ ಮಿತಿಗೊಳಿಸುವಂತೆ ನೀಡಲಾಗುತ್ತಿರುವ ಪ್ರಧಾನಿ ಮೋದಿಯವರ ಕರೆಗಳನ್ನೂ ಅವರು ಪ್ರಶ್ನಿಸಿದರು.
ಕೇಂದ್ರ ಸಚಿವರನ್ನೂ ಕೇಳಿ. ಇಂದು ಪ್ರಧಾನಿ ತಮ್ಮ ಭದ್ರತೆಯಲ್ಲಿ ಎರಡು ವಾಹನಗಳನ್ನು ಕಡಿಮೆ ಮಾಡಬಹುದು, ಸರಿ. ಆದರೆ ದೇಶದ ಎಲ್ಲರೂ ಹಾಗೆ ಮಾಡಬೇಕೇ ಯಾರೂ ಹೊರಗೆ ಪ್ರಯಾಣಿಸಬಾರದೇ ಅದು ಹೇಗೆ ಸಾಧ್ಯ ಅದು ಅವರ ಜೀವನ, ಅವರ ಆದಾಯ, ಅವರ ಕೆಲಸ. ಇದು ಅತ್ಯಂತ ದುರದೃಷ್ಟಕರ. ಚಿನ್ನದ ವಿಷಯದಲ್ಲಿಯೂ ಪ್ರತಿಯೊಬ್ಬರಿಗೂ ಒಂದು ಸಣ್ಣ ಸರ ಬೇಕು, ಮಂಗಳಸೂತ್ರ ಬೇಕು. ಮಂಗಳಸೂತ್ರವನ್ನೂ ಬಿಡಬೇಕೇ ಇದು ನ್ಯಾಯವಲ್ಲ ಎಂದರು.
ಇಂದು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ಗೆ 3 ರೂಪಾಯಿ ಹೆಚ್ಚಿಸಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನ ಆತಂಕಗಳ ನಡುವೆಯೇ ಈ ದರ ಏರಿಕೆ ನಡೆದಿದೆ. ವಿಶೇಷವಾಗಿ ಈ ವರ್ಷದ ಫೆಬ್ರವರಿ 28ರಂದು ಆರಂಭವಾದ ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ಸಂಘರ್ಷವು ಜಾಗತಿಕ ಕಚ್ಚಾ ತೈಲ ಪೂರೈಕೆಯನ್ನು ಅಸ್ತವ್ಯಸ್ತಗೊಳಿಸಿ, ಬ್ರೆಂಟ್ ಕಚ್ಚಾ ತೈಲದ ಬೆಲೆಯನ್ನು ಪ್ರತಿ ಬ್ಯಾರೆಲ್ಗೆ 100 ಅಮೆರಿಕನ್ ಡಾಲರ್ಗಿಂತ ಹೆಚ್ಚಿಸಿದೆ.
ಜಗತ್ತಿನ ಪ್ರಮುಖ ಸಮುದ್ರ ಮಾರ್ಗಗಳಲ್ಲೊಂದಾದ ಹಾರ್ಮುಜ್ ಜಲಸಂಧಿಯ ಸಮೀಪ ಉಂಟಾದ ಅಡಚಣೆಗಳು ಮತ್ತು ತಡೆಗಳಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ. ಈ ಸಂಘರ್ಷದಲ್ಲಿ ಭಾಗಿಯಾಗಿರುವ ಹಲವು ಪಶ್ಚಿಮ ಏಷ್ಯಾದ ರಾಷ್ಟ್ರಗಳು ಜಾಗತಿಕವಾಗಿ ಪ್ರಮುಖ ಇಂಧನ ಪೂರೈಕೆದಾರರಾಗಿವೆ.
ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯಾದರೂ, ದೇಶದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದ್ದು ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
Advertisement