

ಬೆಂಗಳೂರು: ಭಾರತ ಚುನಾವಣಾ ಆಯೋಗ (ECI) ಕರ್ನಾಟಕ ಸೇರಿ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಮೂರನೇ ಹಂತವನ್ನು ನಡೆಸಲಾಗುವುದು ಎಂದು ಘೋಷಿಸಿದ ಬಳಿಕ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ , ನೊಟೀಸ್ ನೀಡುವುದು ಎಂದರೆ ಮತದಾರರ ಹೆಸರುಗಳನ್ನು ಅಳಿಸುವುದಲ್ಲ ಮತ್ತು ಅದು ಕಾನೂನು ನೊಟೀಸ್ ಕೂಡ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕ್ರಿಯೆಯನ್ನು ವಿವರಿಸಿದ ಸಿಇಒ, ಪರಿಶೀಲನೆಗಾಗಿ ಮತದಾರರು ತಮ್ಮ ವಿವರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಲು ನೊಟೀಸ್ ಒಂದು ಸಂವಹನ ವಿಧಾನವಾಗಿದೆ ಎಂದು ಹೇಳಿದರು. ಎಲ್ಲಾ ಅರ್ಹ ಮತದಾರರ ಹೆಸರುಗಳನ್ನು ಸೇರಿಸುವುದೇ ಉದ್ದೇಶವಾಗಿರುವುದರಿಂದ ನಾಗರಿಕರು ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದರು.
ಕೆಲವು ನಾಗರಿಕರ ಹೆಸರುಗಳು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಇದ್ದರೆ, ಅವರು ತಮ್ಮ ಹೆಸರು ಮತ್ತು ವಿವರಗಳು ಒಂದೇ ಸ್ಥಳದ ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಹಿಂದಿನ ಎಸ್ಐಆರ್ ಮತದಾರರ ಪಟ್ಟಿಗಳು ಲಭ್ಯವಿಲ್ಲದಿದ್ದಾಗ ಅಥವಾ ಡೇಟಾಬೇಸ್ಗೆ ಹೊಂದಿಕೆಯಾಗದಿದ್ದಾಗ ಮಾತ್ರ ನೊಟೀಸ್ ನೀಡಲಾಗುವುದು ಎಂದು ಅನ್ಬುಕುಮಾರ್ ಹೇಳಿದರು. ಆಧಾರ್ ಜೊತೆಗೆ ಮತದಾರರು ಗುರುತಿನ ಮತ್ತು ವಾಸಸ್ಥಳದ ದಾಖಲೆಗಳನ್ನು ಸಲ್ಲಿಸಬೇಕು. ಅಗತ್ಯ ದಾಖಲೆಗಳ ಪಟ್ಟಿ ಎಣಿಕೆ ಫಾರ್ಮ್ನಲ್ಲಿ ನೀಡಲಾಗಿದೆ. ಮತದಾರರ ಮ್ಯಾಪಿಂಗ್ ಬಳಿಕ ಎಣಿಕೆ ಫಾರ್ಮ್ಗಳನ್ನು ಸಿದ್ಧಪಡಿಸಲಾಗುತ್ತದೆ. ಪ್ರತಿಯೊಬ್ಬ ಮತದಾರನಿಗೂ ಭಾಗಶಃ ಪೂರ್ವಭರಿತಗೊಂಡ ಎರಡು ವೈಯಕ್ತಿಕ ಫಾರ್ಮ್ಗಳನ್ನು ಭರ್ತಿ ಮಾಡಿ ಪರಿಶೀಲಿಸಲು ನೀಡಲಾಗುತ್ತದೆ ಎಂದು ತಿಳಿಸಿದರು.
ಮೇ 13ರ ವೇಳೆಗೆ ಕರ್ನಾಟಕದ 5,55,67,598 ಮತದಾರರಲ್ಲಿ 86.46% ಅಂದರೆ 4,79,46,884 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ.
ಎಸ್ಐಆರ್ ಪ್ರಕ್ರಿಯೆ ಜೂನ್ 30ರಿಂದ ಆರಂಭವಾಗಲಿದೆ. ಹೀಗಾಗಿ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನೂ ಸಮಯವಿದೆ. ನಾಗರಿಕರ ಮ್ಯಾಪಿಂಗ್ ಆಗದಿದ್ದರೆ ಅವರು ಸಿಇಒ ಕಚೇರಿ ಅಥವಾ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಮಾಹಿತಿ ನೀಡಬಹುದು. ಮ್ಯಾಪಿಂಗ್ ಅಥವಾ ಎಣಿಕೆ ಪ್ರಕ್ರಿಯೆಯಲ್ಲಿ ಯಾವುದೇ ಮತದಾರ ತಪ್ಪಿಹೋಗಿದ್ದರೆ ಸಂಬಂಧಿತ ಬಿಎಲ್ಒ ವಿರುದ್ಧ ತನಿಖೆ ಆರಂಭಿಸಲಾಗುತ್ತದೆ. ಮತದಾರರು ಆನ್ಲೈನ್ನಲ್ಲಿ ಫಾರ್ಮ್ ಭರ್ತಿ ಮಾಡಿದರೂ ಸಹ, ಪರಿಶೀಲನೆಗಾಗಿ ಬಿಎಲ್ಒಗಳು ಅವರ ಮನೆಗೆ ಭೇಟಿ ನೀಡುತ್ತಾರೆ.
ಪ್ರತಿಯೊಬ್ಬ ಮತದಾರರನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಲು ಬಿಎಲ್ಒಗಳು ಮೂರು ಬಾರಿ ಮನೆಗೆ ಭೇಟಿ ನೀಡುತ್ತಾರೆ. ನಾಗರಿಕರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ರಾಜ್ಯದಲ್ಲಿ 59,050 ಬಿಎಲ್ಒಗಳು ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ ನಿಯೋಜಿಸಲ್ಪಟ್ಟ 25,284 ಬೂತ್ ಮಟ್ಟದ ಏಜೆಂಟ್ಗಳು (BLA) ಇದ್ದಾರೆ ಎಂದರು. ಎಸ್ಐಆರ್ ಪ್ರಕ್ರಿಯೆಗೆ ಇನ್ನಷ್ಟು ಬಿಎಲ್ಎಗಳನ್ನು ನೇಮಿಸುವಂತೆ ರಾಜಕೀಯ ಪಕ್ಷಗಳಿಗೆ ಪತ್ರ ಕಳುಹಿಸಲಾಗಿದೆ ಎಂದು ಹೇಳಿದರು.
ಜೂನ್ 30ರಿಂದ ಸೆಪ್ಟೆಂಬರ್ 7ರವರೆಗೆ ನಡೆಯಲಿರುವ ಮನೆಮನೆಗೆ ತೆರಳಿ ಮತದಾರರ ಪರಿಶೀಲನೆ ಪ್ರಕ್ರಿಯೆಯಲ್ಲಿ ಬಿಎಲ್ಎಗಳು, ಬಿಎಲ್ಒಗಳೊಂದಿಗೆ ಹೋಗಬಹುದು. ಜೊತೆಗೆ 16 ಚುನಾವಣಾ ನೋಂದಣಿ ಅಧಿಕಾರಿಗಳು (IRO) ಮತ್ತು 24 ಸಹಾಯಕ ಇಆರ್ಒಗಳ ನೇಮಕಾತಿಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಮತದಾರರಿಗೆ ಹೆಚ್ಚಿನ ಸಹಾಯಕ್ಕಾಗಿ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಮತದಾರ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಅಲ್ಲಿ ಮತದಾರರು 2002ರ ಎಸ್ಐಆರ್ ವಿವರಗಳನ್ನು ಪರಿಶೀಲಿಸುವುದೂ ಸೇರಿದಂತೆ ಯಾವುದೇ ಸಹಾಯಕ್ಕಾಗಿ ಸಂಪರ್ಕಿಸಬಹುದು ಎಂದು ಸಿಇಒ ಹೇಳಿದರು.
ಬಿಎಲ್ಒಗಳು ಎಣಿಕೆ ಫಾರ್ಮ್ಗಳೊಂದಿಗೆ ಪ್ರತಿಯೊಬ್ಬ ಮತದಾರರ ಮನೆಗೆ ಭೇಟಿ ನೀಡಬೇಕು. ಪರಿಶೀಲನೆಗಾಗಿ ಬಳಸಲಾಗುತ್ತಿರುವ ವಿಳಾಸವು 2025ರ ಮತದಾರರ ಪಟ್ಟಿಯನ್ನು ಆಧರಿಸಿದೆ. ಪ್ರತಿಯೊಬ್ಬ ಮತದಾರರ ವಿವರಗಳನ್ನು ಪರಿಶೀಲಿಸಿ 2002ರ ಎಸ್ಐಆರ್ ದಾಖಲೆಗಳೊಂದಿಗೆ ಹೋಲಿಸಲಾಗುತ್ತಿದೆ ಎಂದು ಅನ್ಬುಕುಮಾರ್ ಹೇಳಿದರು.
ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವ (ಎಸ್ವಿಇಇಪಿ) ಅಭಿಯಾನವು ಸಮಾಂತರವಾಗಿ ಮುಂದುವರಿಯಲಿದೆ.
ಆದರೆ ಎಸ್ಐಆರ್ ಪೂರ್ಣಗೊಳ್ಳುವವರೆಗೆ ವಾರ್ಷಿಕ ಪರಿಷ್ಕರಣೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಎಣಿಕೆ ಫಾರ್ಮ್ ಜೊತೆಗೆ ಅಕ್ಟೋಬರ್ 1ರೊಳಗೆ ಹೊಸ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ಫಾರ್ಮ್ 6ನ್ನೂ ಬಿಎಲ್ಒಗಳು ಹೊಂದಿರುತ್ತಾರೆ.
Advertisement