

ಬೀದರ್: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಮಧ್ಯವರ್ತಿ, ಬಿಜೆಪಿ ಮುಖಂಡ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಬಸವರಾಜ್ ಕನ್ನಾಳೆ ಅವರನ್ನು ಬಂಧಿಸಿದೆ.
ತನಿಖೆಯಲ್ಲಿ ಬಸವರಾಜ್ ಕನ್ನಾಳೆಯೇ ಕೆಪಿಎಸ್ ಸಿ ಹಗರಣದ ಕಿಂಗ್ ಪಿನ್ ಎಂಬ ಸ್ಫೋಟಕ ಅಂಶ ಬಯಲಾಗಿದ್ದು, ಇದೀಗ ಗ್ರಾಮೀಣಾ-ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು ಆರೋಪಿಗೆ ಸ್ವೀಟ್ ತಿನ್ನಿಸುತ್ತಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಚಿವ ಈಶ್ವರ ಖಂಡ್ರೆ ಅವರು ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಆಗ್ರಹಿಸಿದ್ದಾರೆ
ಬಸವರಾಜ ಕನ್ನಾಳೆ ಹಾಗೂ ಸಚಿವ ಈಶ್ವರ ಖಂಡ್ರೆ ನಡುವಿನ ನಿಕಟ ಸಂಬಂಧದ ಬಗ್ಗೆಯೂ ತನಿಖೆಯಾಗಬೇಕು ಎಂದು ಭಗವಂತ ಖೂಬಾ ಅವರು ಒತ್ತಾಯಿಸಿದ್ದಾರೆ.
ಸಚಿವ ಖಂಡ್ರೆ ಅವರು ವಿಧಾನಸೌಧದ ತಮ್ಮ ಖಾಸಗಿ ಕೋಣೆಯಲ್ಲಿ ಕನ್ನಾಳೆ ಬಾಯಿಗೆ ಸಿಹಿ ತಿನ್ನಿಸುತ್ತಿರುವ ಫೋಟೋ ವೈರಲ್ ಆಗಿದೆ. ಕೆಪಿಎಸ್ ಸಿ ಅಕ್ರಮದ ಮಧ್ಯವರ್ತಿ ಕನ್ನಾಳೆ ಮೇಲೆ ಖಂಡ್ರೆಗೆ ಯಾಕಿಷ್ಟು ಪ್ರೀತಿ ಎಂಬುದೇ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ. ಅಲ್ಲದೆ ಕನ್ನಾಳೆ ಜೊತೆ ಇಷ್ಟೊಂದು ನಿಕಟ ಸಂಬಂಧ ಹೊಂದಿರುವುದು ಏಕೆ? ಇದರ ಹಿಂದೆ ಯಾವ ಉದ್ದೇಶ ಇದೆ? ಖೂಬಾ ಪ್ರಶ್ನಿಸಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದ ನಿವಾಸಿ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಬಸವರಾಜ್ ಕನ್ನಾಳೆ ಅವರನ್ನು ಭಾನುವಾರ ದೆಹಲಿಯ ವಿಮಾನ ನಿಲ್ದಾಣದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
40 ಲಕ್ಷ ರೂಪಾಗೆ ಪ್ರಶ್ನೆ ಪತ್ರಿಕೆ ಮಾರಾಟ
ಐಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದು, ಅವುಗಳನ್ನು ಮಧ್ಯವರ್ತಿ ಹಾಗೂ ಬೀದರ್ ಜಿಲ್ಲೆ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಮೂಲ ಅಭ್ಯರ್ಥಿಗಳಿಗೆ ಒಂದಕ್ಕೆ 40 ಲಕ್ಷ ರೂಪಾಯಿಯಂತೆ ಮಾರಾಟ ಮಾಡಿದ್ದರಂತೆ. ಅಷ್ಟೇ ಅಲ್ಲದೇ ಸಾಕ್ಷ್ಯ ನಾಶಪಡಿಸಲು ಓಎಂಆರ್ ಶೀಟ್ ತಿದ್ದುಪಡಿ ಹಾಗೂ ಸ್ಟ್ರಾಂಗ್ ರೂಮ್ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಲು ಯತ್ನಿಸಿರೋದು ತನಿಖೆಯಲ್ಲಿ ಪತ್ತೆಯಾಗಿದೆ.