

ಬೆಂಗಳೂರು: ನಾಗೇಂದ್ರ ಆಯ್ತು, ಈಗ ಡಿಕೆ ಶಿವಕುಮಾರ್ ಸಂಪುಟದ ಎರಡನೇ ವಿಕೆಟ್ ಪತನಕ್ಕೆ ಪ್ರತಿಪಕ್ಷ ಬಿಜೆಪಿ ಎದುರು ನೋಡುತ್ತಿದೆ. ಜಾರಿ ನಿರ್ದೇಶನಾಲಯದ (ED) ತನಿಖೆ ಪೂರ್ಣಗೊಂಡು ಅವರು ನಿರ್ದೋಷಿ ಎಂದು ಸಾಬೀತಾಗುವವರೆಗೆ, ಲೋಕೋಪಯೋಗಿ ಇಲಾಖೆ (PWD) ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ತಕ್ಷಣವೇ ಕೈಬಿಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಇಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಸಚಿವರು ತನಿಖೆ ನಡೆಯುತ್ತಿರುವಾಗ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಮತ್ತು ಕರ್ನಾಟಕದ ಸಾರ್ವಜನಿಕ ಹಣವು ವಿದೇಶದಲ್ಲಿ ಯಾರದ್ದೋ ಖಾಸಗಿ ಆಸ್ತಿಯಾಗಲು ಬಿಡಲ್ಲ ಎಂದು ಅವರು ಹೇಳಿದರು.
"ಇಡಿ (ED) ಬಿಡುಗಡೆ ಮಾಡಿರುವ ಹೇಳಿಕೆಯು ಕರ್ನಾಟಕದಲ್ಲಿನ ರಾಹುಲ್ ಗಾಂಧಿಯವರ 'ಎಟಿಎಂ ಸರ್ಕಾರ'ದ ಮೇಲೆ ತೀವ್ರ ಅನುಮಾನದ ಕಾರ್ಮೋಡವನ್ನು ಸೃಷ್ಟಿಸಿದೆ. ಪಿಡಬ್ಲ್ಯೂಡಿ (PWD) ಗುತ್ತಿಗೆಗಳ ಮೂಲಕ ಸಂಗ್ರಹಿಸಿದ ಹಣವನ್ನು ವಿದೇಶದಲ್ಲಿ ಚಿನ್ನದ ಗಣಿಗಾರಿಕೆಯಾಗಿ ಪರಿವರ್ತಿಸಿದರೆಂಬ ಗಂಭೀರ ಆರೋಪವನ್ನು ಸಚಿವ ಸತೀಶ್ ಜಾರಕಿಹೊಳಿ ಈಗ ಎದುರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಇಡಿ ಬಹಿರಂಗಪಡಿಸಿರುವ ವಿಷಯಗಳು ಬೆಚ್ಚಿಬೀಳಿಸುವಂತಿವೆ. ಗುತ್ತಿಗೆದಾರರಿಂದ ಸಂಗ್ರಹಿಸಿದ ಹಣವನ್ನು ಅನಧಿಕೃತ ಮಾರ್ಗಗಳ ಮೂಲಕ ವಿದೇಶದಲ್ಲಿ ಆಸ್ತಿಗಳನ್ನು ಖರೀದಿಸಲು ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿನ ಚಿನ್ನದ ಗಣಿಗಾರಿಕೆ ಕಂಪನಿಯೊಂದರಲ್ಲಿ ಸುಮಾರು ಶೇ. 40ರಷ್ಟು ಪಾಲು ಪಡೆಯಲು ಬಳಸಲಾಗಿದೆ ಎಂದು ಕೇಂದ್ರ ಸಂಸ್ಥೆ ಆರೋಪಿಸಿದೆ ಎಂದು ಅಶೋಕ್ ವಿವರಿಸಿದರು.
21 ಸ್ಥಳಗಳಲ್ಲಿ ನಡೆಸಿದ ದಾಳಿಯ ವೇಳೆ 3.3 ಕೋಟಿ ರೂ.ಗೂ ಹೆಚ್ಚು ಲೆಕ್ಕಕ್ಕೆ ಸಿಗದ ಭಾರತೀಯ ಕರೆನ್ಸಿ ಹಾಗೂ ಸುಮಾರು 15 ಲಕ್ಷ ರೂ. ಮೌಲ್ಯದ ಯುಎಸ್ ಡಾಲರ್ ಮತ್ತು ಯುರೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಕರ್ನಾಟಕದ ಪಿಡಬ್ಲ್ಯೂಡಿ ಗುತ್ತಿಗೆಗಳಿಂದ ಹಿಡಿದು ಆಫ್ರಿಕಾದ ಚಿನ್ನದ ಗಣಿಗಳವರೆಗೆ ಇಡಿ ಆರೋಪಿಸಿರುವ ಈ ಹಣದ ಹರಿವಿನ ಜಾಡು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ತಿಳಿಸಿದರು.