ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು
= ಸರಳ ಮದುವೆಗೂ ಅದ್ಧೂರಿ ಮದುವೆಗೂ ವ್ಯತ್ಯಾಸವೇನು?
ಸರಳ ಮದುವೇಲಿ ಪುರೋಹಿತರಿಗೆ ದಕ್ಷಿಣೆ ಕೊಟ್ಟರೆ ಸಾಕು.
ಅದ್ಧೂರಿ ಮದುವೇಲಿ ವರದಕ್ಷಿಣೆ ಕೊಡ್ಬೇಕು!
ಜೆ.ಆರ್. ಆದಿನಾರಾಯಣ ಮುನಿ, ಶ್ರೀಕೋಡಿಹಳ್ಳಿಮಠ
= ಹಣ ಸುಖ ನೀಡುತ್ತದೋ ಅಥವಾ ಆನಂದವನ್ನೋ?
ಸುಖ ನೀಡುತ್ತೆ ಅಂತ ತಿಳ್ಕೊಂಡು ಇರುವ ಆನಂದವನ್ನೂ ಕಳ್ಕೋತ್ತೀವಿ!
ಕಬ್ಬಳ್ಳಿ ಟಿ. ಚನ್ನಬಸಪ್ಪ, ಯಲಹಂಕ
= ಮಂಡೂರಿನಲ್ಲಿ ರಾತ್ರಿ ವಾಸ್ತವ್ಯಕ್ಕೆ ಸಿದ್ದರಾಮಯ್ಯ ನಿಮ್ಮನ್ನು ಆಹ್ವಾನಿಸಿದರೆ ಏನು ಮಾಡುತ್ತೀರಿ?
ಕಟ್ಟೆ ಸತ್ಯನಾರಾಯಣ 'ಕಡಿದು ಕಟ್ಟೆ ಹಾಕಿದ್ದು' ಏನು ಅಂತ ಕೇಳ್ತೀನಿ!
ಆರ್.ಸಿ. ಪರಶುರಾಮ್, ಶಿಕಾರಿಪುರ
= ಕನ್ನಡ ಮಾಧ್ಯಮ ಬೇಕೆಂದು ಹೋರಾಡುವವರ ಮಕ್ಕಳು, ಮೊಮ್ಮಕ್ಕಳೇ ಆಂಗ್ಲಮಾಧ್ಯಮದಲ್ಲಿ ಓದುತ್ತಿದ್ದಾರಲ್ಲ?
ಅವರಿಗೆ ಕನ್ನಡದಲ್ಲಿ ಓದಿದ್ರೆ ಕನ್ನಡನಾಡಲ್ಲೇ ಕೆಲಸ ಸಿಗೊಲ್ಲ ಅಂತ ಗೊತ್ತು!
ಸ್ವಾಮಿ ನಿರ್ಮಲಾ, ಉಡಿಗಾಲ
= ಹೆಂಗಸರು ಜಗಳವಾಡುತ್ತಿದ್ದಾಗ ನೆಟಿಕೆ ಮುರಿಯುವುದೇಕೆ?
ಬೇರೆಯವರ ಕಾಲು ಕೈ ಮುರಿಯಲು ಆಗೋಲ್ವಲ್ಲ!
ಕೆ.ಟಿ. ರುದ್ರಪ್ಪ, ಚಿತ್ರದುರ್ಗ
= ಮದುವೆ ಆದ ಮೊದಲ ವರ್ಷ ಆಷಾಡ ಮಾಸದಲ್ಲಿ ಅತ್ತೆ ಸೊಸೆ ಒಟ್ಟಿಗೆ ಇರಬಾರದಂತೆ ಏಕೆ?
ಮೊದಲನೇ ವರ್ಷ ಜಗಳ ಕಡಿಮೆ ಇರಲಿ ಅಂತ!
ಬರ್ಕ್ಲಿ ರಮೇಶ್, ಕಿರಗಂದೂರು, ಮಂಡ್ಯ
= ಹದಿಹರೆಯದಲ್ಲಿ ಪ್ರೀತಿಸಿದವನಿಗೆ ಪ್ರೇಮಿ ಅಂತಾರೆ. ವಯಸ್ಸಾದ ಮೇಲೆ ಪ್ರೀತಿಸಿದವನಿಗೆ ಏನಂತಾರೆ?
ಮುದಿಹರೆಯದವನು ಅಂತಾರೆ!
-ಎಸ್.ವಿ. ಪದ್ಮನಾಭ
Advertisement