ತ್ರಿಮೂರ್ತಿಗಳೆಂದು ಕರೆಯಲ್ಪಡುವ ಬ್ರಹ್ಮ ವಿಷ್ಣು ಮಹೇಶ್ವರರು ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣ. ಮೂರು ಶಕ್ತಿಗಳು ಒಗ್ಗೂಡಿ ಈ ಜಗತ್ತನ್ನು ನಿಯಂತ್ರಿಸುತ್ತದೆಂಬ ಭಾರತೀಯ ತತ್ವ ಚಿಂತನೆಯ ಪ್ರತೀಕ. ತ್ರಿಮೂರ್ತಿಗಳ ಪೈಕಿ ಶಿವ-ವಿಷ್ಣು ಬೇಧದ ಬಗ್ಗೆ ಅನೇಕ ಬಾರಿ ಪಂಡಿತರು ವಿದ್ವಾಂಸರ ನಡುವೆ ವಾಗ್ವಾದ, ಚರ್ಚೆಗಳು ನಡೆದಿವೆ.
ವಿಷ್ಣು- ಶಿವನನ್ನು ಆರಾಧಿಸುವ ವೈಷ್ಣವ- ಶೈವ ಪಂಥವೂ ಆಚರಣೆಯಲ್ಲಿದೆ. ಶಿವ- ವಿಷ್ಣು ಬೇಧದ ಬಗ್ಗೆ ಅದೆಷ್ಟೇ ಚರ್ಚೆ ನಡೆದರೂ, ಶಂಕರಾಚಾರ್ಯರು ಸೇರಿದಂತೆ ಸನಾತನ ಧರ್ಮದ ಅನೇಕ ಶ್ರೇಷ್ಠ ದಾರ್ಶನಿಕರು ಶಿವ-ವಿಷ್ಣು ನಡುವೆ ಬೇಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ದಾರ್ಶನಿಕರು, ಋಷಿಗಳಿಗಿಂತ ಮೊದಲೇ ಅಸ್ತಿತ್ವದಲ್ಲಿದ್ದ ಶಾಸ್ತ್ರಗಳು, "ಶಿವಾಯ ವಿಷ್ಣು ರುಪಾಯ, ಶಿವರೂಪಾಯ ವಿಷ್ಣವೇ, ಶಿವಶ್ಚ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಗಂ ಶಿವಃ" ಎಂಬ ಶ್ಲೋಕದಿಂದ ಶಿವ-ವಿಷ್ಣುವಿನ ನಡುವೆ ಬೇಧವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿವೆ.
ಶೃತಿ-ಸ್ಮೃತಿ, ಗ್ರಂಥಗಳನ್ನು ಹೊರತಾಗಿ ಅಂದರೆ ಸ್ಥಿತಿ, ಲಯಗಳ ಉದಾಹರಣೆಗಳೂ ಸಹ ಶಿವ-ವಿಷ್ಣು ಒಬ್ಬರನ್ನು ಹೊರತುಪಡಿಸಿ ಮತ್ತೊಬ್ಬರ ಅಸ್ತಿತ್ವವೇ ಸಾಧ್ಯವಿಲ್ಲ ಎಂಬುದನ್ನು ತಿಳಿಸುತ್ತವೆ. ಸೃಷ್ಟಿಯ ನಂತರ ಸ್ಥಿತಿ ಸ್ಥಿತಿಯ ನಂತರ ನಾಶ ಇದು ಪ್ರಕೃತಿ ನಿಯಮ. ಸೃಷ್ಟಿಯ ನಂತರದ ಸ್ಥಿತಿಗೆ ಹಾಗೂ ನಾಶ(ಲಯ) ಕ್ಕೆ ಸಂಬಂಧವಿದೆ. ಯಾವುದೇ ಕ್ರಿಯೆ ನಡೆಯಬೇಕೆಂದರೆ ಅಲ್ಲಿ ಸ್ಥಿತಿ- ಲಯಗಳ ಅಸ್ತಿತ್ವ ಇದ್ದೇ ಇರುತ್ತದೆ. ಅಂದರೆ ಹರಿಹರರ ಸಾನ್ನಿಧ್ಯ ಇದ್ದೇ ಇರುತ್ತದೆ. ಹರಿ-ಹರ, ಶಂಕರ-ನಾರಾಯಣರ ಸಾನ್ನಿಧ್ಯ ಇರುವ ಅನೇಕ ದೇವಾಲಯಗಳು ಶಿವ-ಕೇಶವರಲ್ಲಿ ಬೇಧವಿಲ್ಲ ಎಂದು ಸಾರಿ ಹೇಳುತ್ತಿವೆ.
ಇನ್ನು ಸೃಷ್ಟಿಗೆ ಸಂಬಂಧಿಸಿದಂತೆಯೂ ಭಾರತೀಯ ಪುರಾಣಗಳು ಶಿವನ ವಿಶಿಷ್ಟ ಸ್ಥಾನವನ್ನು ತಿಳಿಸಿವೆ. ಸೃಷ್ಟಿಗೆ ಕಾರಣನಾಗಿರುವ ಬ್ರಹ್ಮ ನಿದ್ರೆಗೆ ಜಾರಿದಾಗ ಸೃಷ್ಟಿ ಜಡವಾಗುತ್ತದೆ. ಆಗ ಜಗತ್ತನ್ನು ಜಾಗೃತಾವಸ್ಥೆಗೆ ತರಲು ತನ್ನ ಡಮರು ನಿನಾದದಿಂದ ಸೃಷ್ಟಿ ಕಾರ್ಯಕ್ಕೆ ಪ್ರೇರಣೆ ಕೊಡುವವನು ಶಿವ ಎಂಬುದು ಪುರಾಣಗಳ ಅಭಿಮತ. ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಯಾರು ಹೆಚ್ಚು ಮಹತ್ವ ಎಂಬುದಕ್ಕಿಂತಲೂ ಸೃಷ್ಟಿ ಸ್ಥಿತಿ ಲಯ ಮೂರು ಒಂದಕ್ಕೆ ಒಂದು ಪೂರಕ ಎಂದು ಭಾರತೀಯ ಪುರಾಣಗಳು ಹೇಳಿವೆ.
Advertisement