ನವದೆಹಲಿ: ಲಷ್ಕರ್ ಉಗ್ರ, ಮಾಸ್ಟರ್ ಬಾಂಬ್ ತಯಾರಕ ಅಬ್ದುಲ್ ಕರೀಂ ತುಂಡಾ ಮೇಲೆ ಮಂಗಳವಾರ ಕೋರ್ಟ್ ಆವರಣದಲ್ಲೇ ಹಲ್ಲೆ ನಡೆದಿದೆ. ತುಂಡಾನನ್ನು ಪೊಲೀಸರು ಪಟಿಯಾಲಾ ಹೌಸ್ ಕೋರ್ಟ್ಗೆ ಕರೆತರುತ್ತಿದ್ದ ವೇಳೆ ಕೋರ್ಟ್ ಆವರಣದಲ್ಲೇ ಹಿಂದೂ ಸೇನೆಯ ಕಾರ್ಯಕರ್ತನೊಬ್ಬ ತುಂಡಾ ಮೇಲೆ ಹಲ್ಲೆ ನಡೆಸಿದ್ದಾನೆ. ಮೊದಲು ಆತ ತುಂಡಾ ಕೆನ್ನೆಗೆ ಬಾರಿಸಲು ಯತ್ನಿಸಿದಾಗ ಪೊಲೀಸರು ತಡೆದರು. ಆಗ ಆತ ತುಂಡಾನ ಬೆನ್ನಿಗೆ ಬಾರಿಸಿದ್ದಾನೆ.
ಬಳಿಕ ತುಂಡಾನನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ರಹಸ್ಯ ವಿಚಾರಣೆಗೆ ಕೋರ್ಟ್ ಸೂಚಿಸಿತು.
ನನ್ನಲ್ಲಿ ಹಣವಿಲ್ಲ: ಇದೇ ವೇಳೆ, ನಿಮ್ಮನ್ನು ಯಾರು ಪ್ರತಿನಿಧಿಸಲಿದ್ದಾರೆ ಎಂದು ಕೋರ್ಟ್ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ತುಂಡಾ, ನನ್ನಲ್ಲಿ ವಕೀಲರಿಗೆ ಕೊಡಲು ಹಣವಿಲ್ಲ ಎಂದಿದ್ದಾನೆ.
ಏತನ್ಮಧ್ಯೆ, ಭಾರತದ ನಕಲಿ ನೋಟು ಜಾಲದ ಡೀಲರ್ ಇಕ್ಬಾಲ್ ಕಾನಾ ಪಾಕ್ ಸೇನಾಧಿಕಾರಿಯಿಂದ ನಕಲಿ ನೋಟು ಪಡೆಯುತ್ತಿದ್ದ ಎಂದು ವಿಚಾರಣೆ ವೇಳೆ ತುಂಡಾ ಬಾಯಿಬಿಟ್ಟಿದ್ದಾನೆ.
Advertisement