ನವದೆಹಲಿ: ಬಾಕ್ಸರ್ ಆಟಗಾರ್ತಿ ಸರಿತಾ ದೇವಿಯ ಮೇಲಿನ ನಿಷೇಧದ ತೆರವು ಮಾಡುವಂತೆ ಕೋರಿ ಭಾರತೀಯ ಕ್ರೀಡಾ ಸಚಿವಾಲಯ, ಅಮೇಚರ್ ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್ಗೆ ಮನವಿ ಪತ್ರ ರವಾನಿಸಿದೆ.
ಈ ಕುರಿತು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕ್ರೀಡಾ ಸಚಿವ ಸರ್ಬನಂದ ಸೋನವಾಲ್, ಸರಿತಾ ದೇವಿಯ ವಿರುದ್ಧ ಕೈಗೊಂಡಿರುವ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಕೋರಿ, ಅಮೇಚರ್ ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್ಗೆ ಭಾರತ ಸರ್ಕಾರ ಪತ್ರ ಬರೆದಿದೆ ಎಂದು ವಿವರಿಸಿದರು.
ಸರಿತಾ ದೇವಿಯು ಅತ್ಯಂತ ಬಡ ಕುಟುಂಬದಿಂದ ಬಂದವಳು, ತೀವ್ರ ಪರಿಶ್ರಮದ ಮೂಲಕ ಆಕೆ ಇಂದು ಉನ್ನತ ಮಟ್ಟದಲ್ಲಿ ಬೆಳೆದಿದ್ದಾಳೆ, ಅಂತರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್ ಸಂಸ್ಥೆಯ ನಿರ್ಧಾರದಿಂದ ಆಕೆಭ ಭವಿಷ್ಯಕ್ಕೆ ಬಾರಿ ಪೆಟ್ಟು ಬೀಳಲಿದೆ. ಇದನ್ನು ಪರಿಗಣಿಸಿ ಆಕೆಯ ಮೇಲಿನ ನಿಷೇಧವನ್ನು ತೆರವು ಗೊಳಿಸುವಂತೆ ಮನವಿಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕ್ರಿಕೆಟ್ ಆಟಗಾರ ಮತ್ತು ಸಂಸದ ಸಚಿನ್ ತೆಂಡೂಲ್ಕರ್, ಸರಿತಾ ದೇವಿ ಉತ್ತಮ ಆಟಗಾರ್ತಿಯಾಗಿದ್ದು, ಸಹಾನೂಭೂತಿಯ ಆಧಾರದ ಮೇಲೆ ಆಕೆಯ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಮನವಿ ಮಾಡಿರುವುದಾಗಿ ವಿವರಿಸಿದರು.
2014 ರಲ್ಲಿ ನಡೆದ ಏಶಿಯನ್ ಕ್ರೀಡಾ ಸಂದರ್ಭದಲ್ಲಿ, ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕವನ್ನು ತೆಗೆದುಕೊಳ್ಳಲು ತಿರಸ್ಕರಿಸಿದ ಕಾರಣ ಆಕೆಯನ್ನು ಏಶಿಯನ್ ಕ್ರೀಡೆಯಿಂದ, ಅಮೆಚರ್ ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್ ಸರಿತಾ ದೇವಿಗೆ ಆಜೀವ ನಿಶೇಧವನ್ನು ಹೇರಿತ್ತು.
Advertisement