ನವದೆಹಲಿ: ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರು ಹೊತ್ತಿಸಿದ ವಿವಾದದ ಬೆಂಕಿ ಇನ್ನೂ ಆರಿಲ್ಲ.
ಇಷ್ಟು ದಿನ ಸಂಸತ್ನೊಳಗಿದ್ದ ಗದ್ದಲ ಈಗ ಹೊರಕ್ಕೂ ವ್ಯಾಪಿಸಿದೆ. ಶುಕ್ರವಾರ ಪ್ರತಿಪಕ್ಷಗಳು ಹಾಗೂ ಆಡಳಿತ ಪಕ್ಷದ ಪ್ರತಿಭಟನೆಗೆ ಸಂಸತ್ಭವನದ ಹೊರಗಿನ ಮಹಾತ್ಮಾ ಗಾಂಧಿ ಪ್ರತಿಮೆ ಸಾಕ್ಷಿಯಾಯಿತು. ಮೊದಲಿಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಗಾಂಧಿ ಪ್ರತಿಮೆ ಮುಂದೆ ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರೆ, ಸ್ವಲ್ಬ ಹೊತ್ತಿನ ಬಳಿಕ ಅದೇ ಸ್ಥಳದಲ್ಲಿ ಬಿಜೆಪಿ ಸದಸ್ಯರು ಭಜನೆ ಹಾಡುವ ಮೂಲಕ ಪ್ರತಿಭಟಿಸಿದರು.
ಒಂದೆಡೆ ಕಪ್ಪುಪಟ್ಟಿ, ಮತ್ತೊಂದೆಡೆ ಭಜನೆ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರೆಲ್ಲರೂ ಬೆಳಗ್ಗೆ ಗಾಂಧಿ ಪ್ರತಿಮೆಯ ಮುಂದೆ ನಿಂತು, ಬಾಯಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. ಅವಹೇಳನಕಾರಿ ಹೇಳಿಕೆ ನೀಡಿದ ಸಾಧ್ವಿಯನ್ನು ಕಿತ್ತುಹಾಕಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ರಾಹುಲ್, ನಮಗೆ ಸಂಸತ್ನೊಳಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ.
ಪ್ರಜಾಸತ್ತಾತ್ಮಕ ಸಂವಾದಕ್ಕೆ ಅವಕಾಶ ನೀಡಬಾರದು ಎಂಬ ಮನಸ್ಥಿತಿಯನ್ನು ನಮ್ಮ ದೇಶದ ಉನ್ನತ ನಾಯಕರು ಹೊಂದಿದ್ದಾರೆ ಎಂದರು. ಕಾಂಗ್ರೆಸ್ನ ಪ್ರತಿಭಟನೆ ಮುಗಿಯುತ್ತಿದ್ದಂತೆ, ಗಾಂಧಿ ಪ್ರತಿಮೆ ಬಳಿಬಂದ ಬಿಜೆಪಿ ಸಂಸದರು ಸಂಸತ್ ಕಲಾಪವನ್ನು ಸುಗಮವಾಗಿ ನಡೆಯಲು ಬಿಡದ ಪ್ರತಿಪಕ್ಷಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಮಹಾತ್ಮ ಗಾಂಧಿಯವರ ಪ್ರೀತಿಯ 'ರಘುಪತಿ ರಾಘವ ರಾಜಾರಾಂ' ಭಜನೆ ಹಾಡುತ್ತಾ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು.
ಹೃದಯ ವೈಶಾಲ್ಯತೆ ತೋರಿ
ಇದಕ್ಕೂ ಮೊದಲು ಸಂಸತ್ನೊಳಗೂ ಪ್ರತಿಪಕ್ಷಗಳು ಭಾರಿ ಗದ್ದಲ ಎಬ್ಬಿಸಿದವು. ಸಂಸತ್ನೊಳಗೂ ಪ್ರತಿಪಕ್ಷಗಳು ಭಾರಿ ಗದ್ದಲ ಎಬ್ಬಿಸಿದವು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, 'ಎಲ್ಲ ಪಕ್ಷಗಳೂ ಸಚಿವೆಯ ಕ್ಷಮೆಯನ್ನು ಸ್ವೀಕರಿಸಿ, ತಮ್ಮ ತಮ್ಮ ಕೆಲಸ ಮುಂದುವರಿಸಿ. ನಮ್ಮ ಸಹೋದ್ಯೋಗಿಯೊಬ್ಬರು ಕ್ಷಮೆ ಕೇಳುತ್ತಿದ್ದಾರೆ ಎಂದರೆ, ಅದನ್ನು ಒಪ್ಪಿಕೊಳ್ಳುವ ಹೃದಯ ವೈಶಾಲ್ಯತೆಯನ್ನು ತೋರಬೇಕು' ಎಂದರು. ಆದರೆ ಪ್ರಧಾನಿ ಮಾತಿಗೆ ಯಾರೂ ಕಿವಿಗೊಡಲಿಲ್ಲ.
ಸೋಮವಾರದೊಳಗೆ ಪರಿಹಾರ ಕಂಡುಕೊಳ್ಳಿ
ಸಾಧ್ವಿ ಹೇಳಿಕೆ ವಿಚಾರ ಕೋಲಾಹಲ ಮೂಡಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಾತನಾಡಿದ ರಾಜ್ಯಸಭೆ ಉಪಸಭಾಪತಿ ಪಿ.ಜೆ.ಕುರಿಯನ್, ಎಲ್ಲ ಪಕ್ಷಗಳೂ ಕುಳಿತುಕೊಂಡು ಚರ್ಚಿಸಿ, ಸೋಮವಾರದೊಳಗೆ ಒಂದು ಪರಿಹಾರ ಕಂಡುಕೊಳ್ಳಿ ಎಂದು ಸೂಚಿಸಿದ್ದಾರೆ.
ನಿವೃತ್ತಿ ವಯಸ್ಸು ಏರಿಕೆ ಮಾಡುವ ಪ್ರಸ್ತಾಪವಿಲ್ಲ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಏರಿಕೆ ಮಾಡುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದೇ ವೇಳೆ ಹೈ ಕೋರ್ಟ್ ನ್ಯಾಯಾಮೂರ್ತಿಗಳ ನಿವೃತ್ತಿ ವಯಸ್ಸಿನ ಏರಿಕೆ ಬಗ್ಗೆ ಭರವಸೆ ನೀಡಲೂ ಹಿಂಜರಿದಿದೆ. ಜತೆಗೆ, ಸುಪ್ರೀಂನಲ್ಲಿ ಕೇವಲ 3 ಹುದ್ದೆಗಳಷ್ಟೇ ಖಾಲಿಯಿವೆ. 24 ಹೈಕೋರ್ಟ್ ಗಳಲ್ಲಿ 355 ಹುದ್ದೆಗಳು ಖಾಲಿಬಿದ್ದಿವೆ ಎಂದು ಕಾನೂನು ಸಚಿವ ಸದಾನಂದ ಗೌಡ ಅವರು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಯಾರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಈ ರೀತಿ ವರ್ತಿಸುತ್ತಿದೆ? ಈ ರೀತಿ ಕಲಾಪಕ್ಕೆ ಅಡ್ಡಿ ಮಾಡುವ ಯತ್ನವು ನಿಮಗೇ ತಿರುಗುಬಾಣವಾಗಲಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರರು ಕೂಡಲೇ ಲೋಕಸಭೆಗೆ ಹಿಂತಿರುಗಿ ಕಲಾಪದಲ್ಲಿ ಪಾಲ್ಗೊಳ್ಳಲಿ.
ವೆಂಕಯ್ಯ ನಾಯ್ಡು,
ಸಂಸದೀಯ ವ್ಯವಹಾರಗಳ ಸಚಿವ
Advertisement