ಬೆಂಗಳೂರು: ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರು ಕಡ್ಡಾಯವಾಗಿ ಡಿಸೆಂಬರ್ 31ರೊಳಗೆ ಪೊಲೀಸ್ ಇಲಾಖೆಯಿಂದ 'ಅಪರಾಧ ಹಿನ್ನೆಲೆ'ಯ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕು. ಅಷ್ಟೇ ಅಲ್ಲ, ಮೋಟಾರು ವಾಹನ ಕಾಯ್ದೆ 1988ರ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತದೆ.
ಇಂಥದ್ದೊಂದು ಆದೇಶ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಮಂಗಳವಾರ ಹೊರಬಿದ್ದಿದೆ. ಆ ಮೂಲಕ ದೆಹಲಿ ಅತ್ಯಾಚಾರ ಪ್ರಕರಣದ ನಂತರ ರಾಜ್ಯದ ಪ್ರಾದೇಶಿಕ ಸಾರಿಗೆ, ಪೊಲೀಸ್ ಇಲಾಖೆ ನಿದ್ದೆಯಿಂದ ಎಚ್ಚೆತ್ತುಕೊಂಡಿದ್ದು, ಪ್ರಯಾಣಿಕರ ಸುರಕ್ಷತೆಗೆ ಮುಂದಾಗಿದೆ.
ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು, ಆಟೋ ಚಾಲಕಕ ಜತೆ ಸಭೆ ನಡೆಸಿದ ಬಳಿಕ ಇಲಾಖೆ ಆಯುಕ್ತ ಡಾ.ರಾಮೇಗೌಡ ಮತ್ತು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಜಂಟಿ ಸುದ್ದಿಗೋಷ್ಠಿಯಲ್ಲಿ ನಿಯಮ ಕಡ್ಡಾಯಗೊಳಿಸಿರುವ ವಿಷಯ ತಿಳಿಸಿದರು.
ನಗರಕ್ಕೆ ಮಾತ್ರ
ಸದ್ಯ ಈ ನಿಯಮಗಳು ಬೆಂಗಳೂರಿನ ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ ಮಾತ್ರ ಅನ್ವಯ. ಇತರೆಡೆಯೂ ಜಾರಿ ಅಗತ್ಯವಾದಲ್ಲಿ ಚರ್ಚಿಸಲಾಗುವುದು. ಆದರೆ, ರಾಜ್ಯದ ಎಲ್ಲ ಟೂರಿಸ್ಟ್ ಟ್ಯಾಕ್ಸಿಗಳಿಗೆ ಈ ನಿಯಮ ಸಹಜವಾಗಿಯೇ ಅನ್ವಯ. ಆಟೋ ಚಾಲಕರಿಗೂ ಇದನ್ನು ಅನುಸರಿಸಲು ಆದೇಶಿಸಲಾಗಿದೆ.