
ಕೋಲ್ಕತಾ: ಆತ್ಮಹತ್ಯಾ ಪ್ರಕರಣವನ್ನು ಅಪರಾಧವಲ್ಲ ಎಂಬ ಕೇಂದ್ರ ಸರ್ಕಾರ ನಿರ್ಧಾರದ ಹಿನ್ನೆಲೆಯಲ್ಲಿ ಉಕ್ಕಿನ ಮಹಿಳೆ ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಳಾ ಬಿಡುಗಡೆಗೊಳ್ಳುವ ಸಾಧ್ಯತೆಗಳು ಕೇಳಿಬರುತ್ತಿದೆ.
ಮಾಲೊಮ್ನಲ್ಲಿ ಕಳೆದ 10 ವರ್ಷಗಳ ಹಿಂದೆ ಅಸ್ಸಾಂ ರೈಫಲ್ಸ್ನ ಸಿಬ್ಬಂದಿ ನಡೆಸಿದ ಹತ್ಯಾಕಾಂಡವೊಂದನ್ನು ಪ್ರತಿಭಟಿಸಿ ಶರ್ಮಿಳಾ ಉಪವಾಸ ಮುಷ್ಕರ ಆರಂಭಿಸಿದ್ದರು. ಎಎಫ್ಎಸ್ಪಿಎಯನ್ನು ಹಿಂದಕ್ಕೆ ಪಡೆಯುವುದಲ್ಲದೆ, ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹಿಂಸಾಚಾರವನ್ನು ಪ್ರತಿಭಟಿಸಿ ಶರ್ಮಿಳಾ ತನ್ನ ಉಪವಾಸವನ್ನು ಮುಂದುವರಿಸಿದ್ದರು. 10 ವರ್ಷಗಳಿಂದ ಶರ್ಮಿಳಾ ಒಂದು ತುತ್ತು ಆಹಾರ ಸೇವಿಸಿಲ್ಲ.
ನನ್ನ ಜನರ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ನಾನು ಸಹಿಸಲಾರೆ. ಇದು ದೇವರ ಇಚ್ಛೆ. ನನ್ನ ಈ ಮುಷ್ಕರ ಮುಂದುವರೆಯತ್ತದೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಖಾಸಗೀ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ತಮ್ಮ ಹೋರಾಟವನ್ನು ಮುಂದುವರಿಸಿದ್ದ ಶರ್ಮಿಳಾ ಕಾಲ ಕಳೆಯುತ್ತಿದ್ದಂತೆ ಅನಾರೋಗ್ಯಕ್ಕೀಡಾದ್ದರಿಂದ ತಮ್ಮ ದೇಹದ ತೂಕವನ್ನು ಕಳೆದುಕೊಂಡರು. ಆಕೆಯ ಬಹುತೇಕ ಅಂಗಾಂಗಗಳು ಅನಾರೋಗ್ಯ ಪೀಡಿತಾವಾದವು. ಇದನ್ನು ಗಮನಿಸಿದ ಕೇಂದ್ರ ಸರ್ಕಾರ ಆಕೆಯನ್ನು ಆತ್ಮಹತ್ಯೆ ಅಪರಾಧದ ಕಾಯ್ದೆಯಡಿ ಬಂಧಿಸಿ ವಿಟಮಿನ್ ಮತ್ತು ಪೌಷ್ಟಿಕಾಂಶದ ಮಿಶ್ರಣವನ್ನು ಬಲವಂತವಾಗಿ ಮೂಗಿನ ಮೂಲಕ ಪೂರೈಸಲು ಪ್ರಾರಂಭಿಸಿತ್ತು. ನಂತರ ಶರ್ಮಿಳಾ ಕೈದಿಯಾಗಿಯೇ ಕಾರಾಗೃಹದಲ್ಲಿರುವಂತಾಗಿತ್ತು.
ನಿನ್ನೆ ಕೇಂದ್ರ ಸರ್ಕಾರ ಆತ್ಮಹತ್ಯೆ ಅಪರಾಧವಲ್ಲ ಎಂಬ ನಿರ್ಧಾರ ತೆಗೆದುಕೊಂಡಿದ್ದು ಈ ಹಿನ್ನೆಲೆಯಲ್ಲಿ ಮತ್ತೆ ಶರ್ಮಿಳಾ ಇರೋಮ್ ಬಿಡುಗಡೆಗೊಳ್ಳುವ ಆಶಾಭಾವನೆಗಳು ಶರ್ಮಿಳಾ ಅವರ ಕುಟುಂಬಸ್ಥರಿಗೆ ಮೂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶರ್ಮಿಳಾ ಅವರ ಅಣ್ಣ ಇರೋಮ್ ಸಿಂಗಮ್ಜಿತ್, ಒಂದು ವೇಳೆ ಸರ್ಕಾರ ಮೂಗಿನ ಮೂಲಕ ಆಕೆಗೆ ಆಹಾರ ನೀಡದಿದ್ದರೆ ಅವರ ಪರಿಸ್ಥಿತಿ ಏನಾಗುತ್ತಿತ್ತೋ ಎಂಬುದು ನೆನಪಿಸಿಕೊಳ್ಳುವುದಕ್ಕೂ ಕಷ್ಟಕರವಾಗುತ್ತದೆ.
ಆಕೆಯ ಬಿಡುಗಡೆ ನಮಗೆ ಸಂತಸದ ಸಂಗತಿ ಆದರೆ ಪ್ರಕರಣ ಕುರಿತ ಆಕೆಯ ನಿಲುವು ಎಂದಿಗೂ ಬದಲಾಗುವುದಿಲ್ಲ. ಮುಂದೆ ಮತ್ತೆ ಆಕೆ ಉಪವಾಸ ಕೈಗೊಳ್ಳುವ ಸಂಭವವಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
Advertisement