ನವದೆಹಲಿ: 2001ರಲ್ಲಿ ಡಿ.13 ರಂದು ಸಂಸತ್ ಭನದ ದಾಳಿ ವೇಳೆ ಹುತಾತ್ಮರಾದ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಗೃಹ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ ಸೇರಿದಂತೆ ಎಲ್ಲ ಪಕ್ಷಗಳ ಸಂಸದರು ವೀರ ಯೋಧರಿಗೆ ಗೌರವ ಸಲ್ಲಿಸಿದರು.
ಕಳೆದ 2001 ಡಿಸೆಂಬರ್ 13ರಂದು ಉಗ್ರ ಅಫ್ಜಲ್ ಗುರು ಸೇರಿದಂತೆ ಐವರು ಉಗ್ರಗಾಮಿಗಳು ಭಾರತದ ಪ್ರಜಾಪ್ರಭುತ್ವ ದೇಗುಲವಾದ ಸಂಸತ್ಭವನವನ್ನು ಗುರಿಯನ್ನಾಗಿಸಿ ದಾಳಿ ನಡೆಸಲು ಪ್ರಯತ್ನಿಸಿದರು.
ಭಾರತೀಯ ಸೈನಿಕರು ಉಗ್ರರ ದಾಳಿಯನ್ನು ವಿಫಲಗೊಳಿಸಲು ಪ್ರತಿದಾಳಿ ನಡೆಸಿ, ಸಂಸತ್ ಭವನವನ್ನು ರಕ್ಷಿಸಿದರು. ಈ ದಾಳಿಯ ವೇಳೆ ಅನೇಕ ಯೋಧರು ಮೃತಪಟ್ಟಿದ್ದರು.
ಘಟನೆ ಸಂಭವಿಸಿ ಇಂದಿಗೆ 13 ವರ್ಷಗಳು ಸಂಪೂರ್ಣವಾಗಿದ್ದ ಹಿನ್ನೆಲೆಯಲ್ಲಿ ವೀರ ಯೋಧರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಪುಷ್ಪನಮನದ ಬಳಿಕ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ನಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡಿ, ಘಟನೆಯಲ್ಲಿ ಎದೆಯೊಡ್ಡಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರನ್ನು ಸ್ಮರಿಸಿದ್ದಾರೆ.
ಹುತಾತ್ಮರ ತ್ಯಾಗ ಬಲಿದಾನ ನಮ್ಮ ಮನಸ್ಸಿನಲ್ಲಿದೆ, ಪ್ರಜಾಪ್ರಭುತ್ವ ದೇವಾಲಯವನ್ನು ರಕ್ಷಿಸಲು ಹೋರಾಡಿದ್ದ ಸೈನಿಕರಿಗೆ ನನ್ನದೊಂದು ಸೆಲ್ಯೂಟ್ ಎಂದು ಹೇಳಿದ್ದಾರೆ.
Advertisement