ಪಠಾಣ್ಕೋಟ್: ಕಣ್ಣು ಶಸ್ತ್ರಚಿಕಿತ್ಸೆಗೊಳಪಟ್ಟು ಚಿಕಿತ್ಸೆ ನಂತರ 5 ಮಂದಿ ದೃಷ್ಟಿ ಕಳೆದುಕೊಂಡ ದಾರುಣ ಘಟನೆ ಪಂಜಾಬ್ನ ಪಠಾಣ್ಕೋಟ್ನಲ್ಲಿ ನಡೆದಿದೆ.
ಪಠಾಣ್ಕೋಟ್ನ ಖಾಸಗೀ ಆಸ್ಪತ್ರೆಯೊಂದರಲ್ಲಿ ಸ್ಥಳೀಯ ಸಂಘಟನೆಗಳು ಕಣ್ಣು ಶಸ್ತ್ರಕ್ರಿಯಾ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ಹಿಮಾಚಲ ಪ್ರದೇಶದ ಕಂಗ್ರಾ ಕಣಿವೆಯ ಸುಮಾರು 60ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ 5 ಮಂದಿ ಇದೀಗ ದೃಷ್ಟಿ ಕಳೆದುಕೊಂಡಿದ್ದು, ಇದಕ್ಕೆ ಶಿಬಿರದಲ್ಲಿ ಮಾಡಿಸಿಕೊಂಡ ಶಸ್ತ್ರಚಿಕಿತ್ಸೆಯೇ ಕಾರಣ ಎಂದು ಆರೋಪಸಿದ್ದರು.
ಈ ಆರೋಪವನ್ನು ಪರಿಗಣಿಸಿದ ಹಿಮಾಚಲ ಪ್ರದೇಶದ ಸರ್ಕಾರ, ಪ್ರಕರಣದ ಕುರಿತು ಡಾ.ಎಸ್.ಕೆ.ಶರ್ಮಾ ನೇತೃತ್ವದ ತನಿಖಾ ಆಯೋಗದ ತಂಡವೊಂದನ್ನು ರಚಿಸಿತು. ಪ್ರಕರಣದ ಕುರಿತು ತನಿಖೆ ಕೈಗೊಂಡ ಆಯೋಗ ಶಿಬಿರದಲ್ಲಿ ಭಾಗಿಯಾಗಿರುವ 60 ಮಂದಿಯಲ್ಲಿ ಕೇವಲ 5 ಮಂದಿಯಷ್ಟೇ ಆರೋಪ ಮಾಡುತ್ತಿದ್ದು, ಈಗಾಗಲೇ ಸಮಸ್ಯೆಗೀಡಾದ ಐವರು ರೋಗಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಅಲ್ಲದೆ ಶಸ್ತ್ರಕ್ರಿಯೆ ನಡೆಸಿದ ಶಿಬಿರವನ್ನು ಪರಿಶೀಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ವೇಳೆ ಯಾವುದೇ ರೀತಿ ಅವಘಡಗಳು ನಡೆದಿಲ್ಲ ಎಂದು ತಿಳಿದು ಬಂದಿದೆ. ರೋಗಿಗಳ ಸಮಸ್ಯೆ ಕುರಿತು ಮತ್ತಷ್ಟು ತನಿಖೆಯಾಗಬೇಕಿದೆ ಎಂದು ಶರ್ಮಾ ಹೇಳಿದ್ದಾರೆ.