ಫತೇಗಡ/ಆಗ್ರಾ: ಉತ್ತರಪ್ರದೇಶದ ಆಗ್ರಾದಲ್ಲಿ 300 ಮಂದಿ ಮುಸ್ಲಿಮರು ಹಿಂದೂ ಧರ್ಮಕ್ಕೆ ಮರು ಮತಾಂತರವಾದದ್ದು ವಿವಾದಕ್ಕೆ ಕಾರಣವಾಗಿತ್ತು.
ಈ ಕಿಡಿ ಆರುವ ಮುನ್ನವೇ 12 ಮಂದಿ ಸದಸ್ಯರಿರುವ ಮುಸ್ಲಿಂ ಕುಟುಂಬ ಹಿಂದೂ ಧರ್ಮ ಸ್ವೀಕರಿಸಿದೆ. ಕ್ರಿಸ್ಮಸ್ ದಿನದಂದು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇಳೆ, ಒಡಿಶಾದಲ್ಲಿ ಶನಿವಾರ 80 ಮಂದಿ ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗಿದೆ.
ಅಕಾಲಿ ದಳ ವಿರೋಧ: ದೇಶದೆಲ್ಲೆಡೆ ನಡೆಯುತ್ತಿರುವ ಮರುಮತಾಂತರಕ್ಕೆ ಎನ್ಡಿಎ ಮಿತ್ರಪಕ್ಷ ಶಿರೋಮಣಿ ಅಕಾಲಿದಳ(ಎಸ್ಎಡಿ)ವೂ ಅಪಸ್ವರ ಎತ್ತಿದೆ. ಮತಾಂತರವನ್ನು ದುರದೃಷ್ಟಕರ ಎಂದಿರುವ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ಸಿಂಗ್ ಬಾದಲ್, ಬಲವಂತದ ಮತಾಂತರ ಸಿಖ್ ಧರ್ಮಕ್ಕೆ ವಿರುದ್ಧವಾದದ್ದು. ಇಂತಹುದನ್ನು ಧರ್ಮ ಯಾವತ್ತೂ ಒಪ್ಪಿಲ್ಲ ಎಂದೂ ಬಾದಲ್ ತಿಳಿಸಿದ್ದಾರೆ.
ಇದೇ ವೇಳೆ ಕೇರಳದಲ್ಲಿ ಘರ್ ವಾಪಸಿ ಕಾರ್ಯಕ್ರಮ ಮುಂದುವರಿಸುವುದಾಗಿ ವಿಶ್ವ ಹಿಂದೂ ಪರಿಷತ್ ಹೇಳಿದೆ. ಯಾರಿಗೆ ಹಿಂದೂ ಧರ್ಮದ ಬಗ್ಗೆ ಒಲವಿದೆಯೋ ಅವರಿಗೆ ತಮ್ಮ ಇಚ್ಛೆ ಪೂರೈಸಲು ಈ ಕಾರ್ಯಕ್ರಮ ನೆರವಾಗಲಿದೆ ಎಂದಿದೆ. ಜನವರಿ 1ರಂದು ಮತ್ತೊಂದು ತಂಡವನ್ನು ಹಿಂದೂ ಧರ್ಮಕ್ಕೆ ಮರು ಮತಾಂತರ ಮಾಡಲಾಗುವುದು ಎಂದು ವಿಹಿಂಪ ತಿಳಿಸಿದೆ.
Advertisement