ಮುಂಬೈ: ಮಹಾರಾಷ್ಟ್ರ ನೂತನ ಸಿಎಂ ವಿರುದ್ಧ ಶಿವಸೇನೆ ವಾಗ್ಧಾಳಿ ಮುಂದುವರೆಸಿದೆ.
ಬೆಳಗಾವಿ ಗಡಿ ವಿವಾದ ಕುರಿತಂತೆ ಕರ್ನಾಟಕ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿನ್ನೆಯಷ್ಟೇ ಫಡ್ನವೀಸ್ ವಿರುದ್ಧ ವಾಗ್ಧಾಳಿ ನಡೆಸಿದ್ದ ಶಿವಸೇನೆ, ಇಂದು ಕೂಡ ತನ್ನ ವಾಗ್ಧಾಳಿ ಮುಂದುವರೆಸಿದ್ದು, ರಾಜ್ಯ ವಿಭಜಿಸುವ ಕುರಿತು ಮಾತನಾಡುತ್ತಿರುವ ಮುಖ್ಯಮಂತ್ರಿಗಳು ಮೊದಲು ವಿದರ್ಭ ರಾಜ್ಯ ಅಭಿವೃದ್ಧಿ ಪಡಿಸುವ ಬಗ್ಗೆ ಮಾತನಾಡಲಿ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿಕೊಂಡಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿದರ್ಭದಲ್ಲಿ ಸುಲಭವಾಗಿ ಗೆದ್ದಿದ್ದೇವೆಂದುಕೊಂಡು ರಾಜ್ಯವನ್ನು ವಿಭಜಿಸುವ ಬಗ್ಗೆ ಆಲೋಚನೆ ಮಾಡಬಾರದು. 'ಮಹಾರಾಷ್ಟ್ರದಿಂದ ವಿದರ್ಭ ವಿಭಜಿಸಿದರೆ ತಾಯಿಯಿಂದ ಮಗುವನ್ನು ದೂರ ಮಾಡಿದಂತೆ', ತೆಲಂಗಾಣ ವಿಭಜನೆಯ ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದ ಬಿಜೆಪಿ ಇಂದು ತನ್ನ ಅಧಿಕಾರಾವಧಿಯಲ್ಲಿ ಅದೇ ತಪ್ಪನ್ನು ಮಾಡಲು ಹೊರಟಿದೆ ಎಂದು ತನ್ನ ಮುಖವಾಣಿಯಲ್ಲಿ ಬರೆದುಕೊಂಡಿದೆ.
ಮಂಗಳವಾರ ನಾಗ್ಪುರದಲ್ಲಿ ಹೇಳಿಕೆ ನೀಡಿದ್ದ ಫಡ್ನವೀಸ್, ಪಕ್ಷ ಎಂದಿಗೂ ಸಣ್ಣ ರಾಜ್ಯಗಳ ಅಭಿವೃದ್ಧಿ ಪರವಾಗಿ ನಿಂತಿದ್ದು, ಮಹಾರಾಷ್ಟ್ರದ ವಿದರ್ಭ ಕ್ಷೇತ್ರವನ್ನು ವಿಭಜಿಸುವ ಬಗ್ಗೆ ಕೇಂದ್ರದೊಂದಿಗೆ ಚರ್ಚಿಸಿ, ಈ ಬಗ್ಗೆ ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು, ತೆಲಂಗಾಣದಂತೆ ಹೋರಾಟಗಳಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾದ್ದರಿಂದ ಪಕ್ಷ ಸೌಹಾರ್ದತೆಯನ್ನು ಬಯಸುತ್ತದೆ ಎಂದು ತಿಳಿಸಿದ್ದರು
Advertisement