ಪ್ರಯಾಣ ದರ ಇಳಿಯಲ್ಲ

ಸದ್ಯಕ್ಕೆ ಬಸ್ ಪ್ರಯಾಣ ದರ ಇಳಿಸುವ ಪ್ರಶ್ನೆಯೇ ಇಲ್ಲ ಎಂದು....
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ
Updated on

ಸರಿದೂಗಿಸಲು ಇಳಿಕೆ ಮಾಡಲ್ಲ: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಸದ್ಯಕ್ಕೆ ಬಸ್ ಪ್ರಯಾಣ ದರ ಇಳಿಸುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ಆಗಿ ಹೇಳಿದ್ದಾರೆ.

ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಷ್ಟದಲ್ಲಿವೆ. ಹಾಗಾಗಿ ಸದ್ಯಕ್ಕೆ ಪ್ರಯಾಣ ದರ ಇಳಿಕೆ ಮಾಡುವುದಿಲ್ಲ. ಅಲ್ಲದೆ ಇಂತಹ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಂತರ ತೀರ್ಮಾನಕ್ಕೆ ಬರಬೇಕು. ಅವರು ಬೆಂಗಳೂರಿನಲ್ಲಿಲ್ಲ. ಹಾಗಾಗಿ ಅವರು ಬಂದ ನಂತರ ಈ ಬಗ್ಗೆ ಚರ್ಚಿಸಲಾಗುವುದು ಹಾಗೂ ಇಲಾಖೆಯ ನಷ್ಟ, ಲಾಭದ ಬಗ್ಗೆ ತಿಳಿಸಿಲಾಗುವುದು. ನಂತರ ಅವರು ಕೈಗೊಳ್ಳುವ ತೀರ್ಮಾನಕ್ಕೆ ಇಲಾಖೆ ಬದ್ಧ ಎಂದರು.

ಡೀಸೆಲ್ ದರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನವೆಂಬರ್ 2014 ರಿಂದ ಮಾರ್ಚ್ 2015ರವರೆಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಆಗಬಹುದಾದ ಎಲ್ಲ ರೀತಿಯ ಲಾಭ ಹಾಗೂ ನಷ್ಟಗಳನ್ನು ಅಂದಾಜಿಸಿ ವಿವರಿಸಿದ ಅವರು, ಎಲ್ಲ ಖರ್ಚು, ವೆಚ್ಚ ತೆಗೆದರೆ 8.30ಕೋಟಿ ಉಳಿತಾಯವಾಗಲಿದೆ. ಡೀಸೆಲ್ ದರ ಕಡಿಮೆ ಇರುವ ಕಾರಣ ಇದು ಅಂದಾಜು ಮಾತ್ರ. ಅಷ್ಟೇ ಅಲ್ಲ ಇಲಾಖೆ ಸಿಬ್ಬಂದಿಗೆ ನೀಡಬೇಕಿರುವ ವೇತನ, ಪಿಂಚಣಿ, ಭತ್ಯೆ ಬಾಕಿ ಉಳಿದಿದ್ದು, ಅದಕ್ಕೆ ಸರಿದೂಗಿಸಬೇಕಿದೆ. ಆದ್ದರಿಂದ ಈ ಬಗ್ಗೆ ಸದ್ಯ ತೀರ್ಮಾನ ಕೈಗೊಂಡಿಲ್ಲ. ಈಶಾನ್ಯ ಹಾಗೂ ವಾಯುವ್ಯ ಸಾರಿಗೆಗೆ ಸಡಿಲಗೊಳಿಸಿರುವಂತೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಗೆ ಮೋಟಾರು ವಾಹನ ಕಾಯ್ದೆಯ ತೆರಿಗೆಯನ್ನು ರದ್ದುಪಡಿಸಿದಲ್ಲಿ ಪ್ರಯಾಣದರ ಇಳಿಕೆ ಸಾಧ್ಯ ಎಂದರು.

ನಿರ್ಧಾರದ ಮೊದಲು ಸಿಎಂ ಜತೆ ಚರ್ಚೆ
ಇಲಾಖೆ ಖರೀದಿಸಿರುವ ಮಾರ್ಕೋಪೋಲೋ ಬಸ್‌ಗಳಿಂದ ನಷ್ಟವಾಗುತ್ತಿದ್ದು, ಅವುಗಳನ್ನು ಸಂಚರಿಸದಿರಲು ನಿರ್ಧರಿಸಲಾಗಿದೆ. ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ 45 ಹಾಗೂ ಬಿಎಂಟಿಸಿಯಲ್ಲಿ 98 ಬಸ್‌ಗಳು ಸಂಚರಿಸುತ್ತಿವೆ. ಒಂದು ಬಸ್ ಖರೀದಿಗೆ 35 ಲಕ್ಷ ತಗುಲಲಿದೆ. ಆದರೆ, ಇದರಿಂದ ಯಾವುದೇ ಲಾಭವಿಲ್ಲ. ಇನ್ನು ವೋಲ್ವೋ ಬಸ್‌ಗಳಿಂದ ನಷ್ಟವೂ ಇಲ್ಲ, ಹೆಚ್ಚು ಲಾಭವೂ ಇಲ್ಲ, ಇತ್ತೀಚಿನ ದಿನಗಳಲ್ಲಿ ಈ ಬಸ್‌ಗಳಲ್ಲಿ ಜನರು ಹೆಚ್ಚು ಪ್ರಯಾಣ ಮಾಡಲು ಮನಸ್ಸು ಮಾಡಿದ್ದಾರೆ. ಹಾಗಾಗಿ ಈ ಬಸ್‌ಗಳ ಸಂಚಾರ ಸ್ಥಗಿತಗೊಳಿಸುವ ಯಾವುದೇ ಚಿಂತನೆ ಇಲ್ಲ ಎಂದರು. ಮುಂದಿನ ಮಾರ್ಚ್ ವೇಳೆಗೆ 271 ಸಿಎನ್‌ಜಿ ಬಸ್‌ಗಳು ರಸ್ತೆಗಿಳಿಯಲಿವೆ. ಅವುಗಳ ಪರೀಕ್ಷಾರ್ಥ ಸಂಚಾರ ಈಗಾಗಲೇ ಆರಂಭಿಸಿದ್ದು, ಸಾಧಕ-ಬಾಧಕ ಪರಿಶೀಲಿಸಲಾಗುವುದು.

ಮುಂದಿನ ದಿನಗಳಲ್ಲಿ ಯಾವುದೇ ಹೊಸ ಬಸ್ ಖರೀದಿಸುವ ಮುನ್ನ ಪರಿಶೀಲಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಬಸ್‌ಡೇ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಬಸ್ ಡೇ ದಿನದಂದು ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಿಸುವ ಬಗ್ಗೆ ಕ್ರಮ ಕೈ ಗೊಳ್ಳಲಾಗುತ್ತಿದ್ದು, ಅದಕ್ಕೆ ಈಗಾಗಲೇ ಅಗತ್ಯ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com