ಅಶಿಸ್ತಿಗೆ ನೋಟಿಸು ಜಾರಿ ಹಿನ್ನೆಲೆಯಲ್ಲಿ ಪ್ರತೀಕಾರದ ಕ್ರಮ: ಕುಲಪತಿ
ಬೆಂಗಳೂರು: ಬೆಂಗಳೂರು ವಿವಿ ಕುಲಪತಿ, ಕುಲಸಚಿವರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರ ವಿರುದ್ಧ ಹಾಲಿ ಹಾಗೂ ನಿವೃತ್ತ ಮಹಿಳಾ ಪ್ರಾಧ್ಯಾಪಕರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೊನ್ನು ಸಿದ್ದಾರ್ಥರ ವಿರುದ್ಧ ಕಿರುಕುಳ ದೂರು ನೀಡಲಾಗಿದೆ. ಆದರೆ, ಕುಲಪತಿ ಹಾಗೂ ಕುಲಸಚಿವರು ಇದನ್ನು ಗಂಭೀರವಾಗಿ ಪರಿಗಣಿಸದೇ ಇನ್ನಷ್ಟು ಕಿರುಕುಳ ನೀಡುತ್ತಿದ್ದಾರೆ. ಮೂವರ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ 4 ಹಾಲಿ ಹಾಗೂ ಇಬ್ಬರು ನಿವೃತ್ತ ಪ್ರಾಧ್ಯಾಪಕರು ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸಾ ಅವರಿಗೆ ದೂರು ನೀಡಿದ್ದಾರೆ.
ವಿಭಾಗದಲ್ಲಿ ನಡೆಯುತ್ತಿರುವ ಕಿರುಕುಳದ ಬಗ್ಗೆ ಸುಮಾರು ಒಂದು ವರ್ಷದಿಂದ ವಿವಿಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ವಿಚಾರಣೆ ನಡೆಸುವ ಬದಲು ದೂರುದಾರರಿಗೆ ಕಿರುಕುಳ ನೀಡಲಾಗಿದೆ.
ಮತ್ತೊಂದೆಡೆ ದೂರುದಾರರನ್ನು ಕಡೆಗಣಿಸಿ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಪ್ರೊ.ಬಿ.ತಿಮ್ಮೇಗೌಡ ಹಾಗೂ ಸೀತಮ್ಮ ವಿರುದ್ಧ ದೂರು ನೀಡಲಾಗಿದೆ. ಕನ್ನಡ ವಿಭಾಗದ ಮುಖ್ಯಸ್ಥ ಹೊನ್ನು ಸಿದ್ದಾರ್ಥ ಅವರು ಕಚೇರಿಯಲ್ಲಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆಯೋಗಕ್ಕೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ.
ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸಾ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಪ್ರಾಧ್ಯಾಪಕರ ದೂರು ನನ್ನ ಕೈ ಸೇರಿದೆ. ಪ್ರಾಥಮಿಕ ವಿಚಾರಣೆ ನಡೆಸಿ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ.
ವಿವಿ ಗಮನಕ್ಕೆ ತಾರದೇ ಮಹಿಳಾ ಆಯೋಗದ ಮೆಟ್ಟಿಲು ಹತ್ತಿರುವುದು ಸರಿಯಲ್ಲ. ಬುಧವಾರ ನಡೆಯುವ ಸಿಂಡಿಕೇಟ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
ಸೀತಮ್ಮ, ಕುಲಸಚಿವೆ
ದೂರು ನೀಡಿರುವ ಪ್ರಾಧ್ಯಾಪಕಿಯರು ಸಮಯಕ್ಕೆ ಸರಿಯಾಗಿ ವಿಭಾಗಕ್ಕೆ ಬರುತ್ತಿರಲಿಲ್ಲ. ಅವರ ವಿರುದ್ಧ ಸಾಕಷ್ಟು ಆರೋಪಗಳಿವೆ. ಈ ಸಂಬಂಧ ವಿಭಾಗದ ಮುಖ್ಯಸ್ಥರು ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಕಿರುಕುಳದ ದೂರು ನೀಡಿದ್ದಾರೆ.
ಪ್ರೊ.ಬಿ.ತಿಮ್ಮೇಗೌಡ, ಕುಲಪತಿ
Advertisement