ಮುಂಬೈ: ಮರಾಠರಿಗೆ ಮಹಾರಾಷ್ಟ್ರದ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ೧೬% ಮೀಸಾಲಾತಿ ಸೃಷ್ಟಿಸಿದ್ದ ಹಿಂದಿನ ಕಾಂಗ್ರೆಸ್-ಎನ್ ಸಿ ಪಿ ಸರ್ಕಾರದ ಆದೇಶವನ್ನು ಮುಂಬೈ ಉಚ್ಛ ನ್ಯಾಯಾಲಯ ವಜಾ ಮಾಡಿದೆ.
ಈ ನಿರ್ಣಯ ಸಂವಿಧಾನ ವಿರೋಧಿ ಎಂಬ ಸಾರ್ವಜನಿಕ ಅರ್ಜಿಯ ಹಿನ್ನಲೆಯಲ್ಲಿ ಕೋರ್ಟ್ ಈ ತೀರ್ಪು ನೀಡಿದೆ.
ಸಾರ್ವಜನಿಕ ಸೇವೆಗಳಲ್ಲಿ ಮುಸ್ಲಿಮರಿಗೆ ೫% ಮೀಸಲಿಟ್ಟಿದ್ದ, ಹಿಂದಿನ ಪೃಥ್ವಿರಾಜ್ ಚೌಹಾನ್ ಸರ್ಕಾರದ ಆದೇಶಕ್ಕೂ ಕೋರ್ಟ್ ತಡೆಯೊಡ್ಡಿದೆ. ಆದರೆ ಶಿಕ್ಷಣ ಸಂಸ್ಥೆಗಳಿಗೆ ಮುಸ್ಲಿಮರಿಗೆ ಕೊಟ್ಟಿದ್ದ ಕೋಟಾವನ್ನು ಮಾತ್ರ ಮನ್ನಣೆ ಮಾಡಿದೆ.
ಸಲ್ಲಿಸಿದ್ದ ಈ ಸಾರ್ವಜನಿಕ ಅರ್ಜಿಯಲ್ಲಿ ಮರಾಠರಿಗೆ ಕೊಟ್ಟಿದ್ದ ಮೀಸಲಾತಿಯನ್ನಷ್ಟೇ ಪ್ರಶ್ನಿಸಿ, ಸರ್ಕಾರ ತನ್ನ ನಿರ್ಣಯವನ್ನು ವಾಪಸ್ ತೆಗೆದುಕೊಳ್ಳಲು ಸೂಚಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು.
ವಿಧಾನಸಭೆಗೆ ಇನ್ನು ೪ ತಿಂಗಳು ಉಳಿದಿರುವ ಸಮಯದಲ್ಲಿ, ಕಾಂಗ್ರೆಸ್-ಎನ್ ಸಿ ಪಿ ಸರ್ಕಾರ, ಸರ್ಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮರಾಠರಿಗೆ ಮತ್ತು ಮುಸ್ಲಿಮರಿಗೆ ಕ್ರಮವಾಗಿ ೧೬% ಮತ್ತು ೫% ಮೀಸಲಾತಿ ಒದಗಿಸುವ ನಿರ್ಣಯ ಕೈಗೊಂಡಿತ್ತು.
ಮರಾಠ ಸಮುದಾಯವನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂದು ಸರ್ಕಾರ ತಿಳಿಸಿರುವುದು "ಮಹಾರಾಷ್ಟ್ರದ ಜನತೆಗೆ ಮತ್ತು ಸಮುದಾಯಕ್ಕೆ ಮಾಡಿರುವ ಅವಮಾನ". ಮಾರಾಠ ಎಂಬುವುದು ಮರಾಠಿ ಮಾತನಾಡುವ ಭಾಷಾಮಾಧ್ಯಮದ ಗುಂಪು ಅಷ್ಟೇ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಸಾರ್ವಜನಿಕ ಅರ್ಜಿಯಲ್ಲಿ ತಿಳಿಸಲಾಗಿದೆ.
Advertisement