ಬೆಂಗಳೂರು: ರಾಜ್ಯದಲ್ಲಿ 1ರು ಮುಖ ಬೆಲೆಯ ರೆವಿನ್ಯೂ ಸ್ಟ್ಯಾಂಪನ್ನು ಮರುಬಳಸುವ ಕುರಿತು ಸರ್ಕಾರ ಚಿಂತಿಸಿದೆ ಎಂದು ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಹೈಕೋರ್ಟ್ ಗೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ 1ರು ಮುಖ ಬೆಲೆಯ ಸ್ಟ್ಯಾಂಪನ್ನು ನಿಷೇಧಿಸಲಾಗಿದೆ. ಆದರೂ ಗದಗ ಹಾಗೂ ಇತರೆ ಜಿಲ್ಲೆಗಳ ಕೆಲವು ರಾಷ್ಟ್ರೀಕೃತ ಬ್ಯಾಂಕ್ಗಳು ದಾಖಲೆ ಹಾಗೂ ವಹಿವಾಟುಗಳಿಗೆ 1ರು ಮುಖ ಬೆಲೆಯ ರೆವೆನ್ಯೂ ಸ್ಟ್ಯಾಂಪ್ ನೀಡುವಂತೆ ಗ್ರಾಹಕರಿಗೆ ಬೇಡಿಕೆ ಇಡುತ್ತಿವೆ. ಆದ್ದರಿಂದ ಬೇರೆ ರಾಜ್ಯದಿಂದ ಈ ಸ್ಟ್ಯಾಂಪ್ಗಳನ್ನು ಕಾಳ ಸಂತೆಯಲ್ಲಿ ಮಾರಲಾಗುತ್ತಿದೆ ಎಂದು ಆರೋಪಿಸಿ ಎಸ್.ವಿ.ದೇಸಾಯಿ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ನ್ಯಾ.ಆರ್.ಬಿ.ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ, ರಾಜ್ಯದಲ್ಲಿ ರೆವಿನ್ಯೂ ಸ್ಟ್ಯಾಂಪ್ ಬಳಕೆ ನಿಷೇಧಕ್ಕೆ ಕಾರಣಗಳೇನು ಎಂದು ಆರ್ಟಿಐ ಕಾಯ್ದೆ ಅನ್ವಯ ಮಾಹಿತಿ ಪಡೆದುಕೊಳ್ಳಲು ಇದೇ ವೇಳೆ ಅರ್ಜಿದಾರರಿಗೆ ಸೂಚಿಸಿದೆ.
ಅಬ್ದುಲ್ ಕರೀಂ ಲಾಲ್ ತೆಲಗಿಯ ಛಾಪಾ ಕಾಗದ ಹಗರಣ ಬೆಳಕಿಗೆ ಬಂದ ಬಳಿಕ 2003ರಲ್ಲಿ ಕರ್ನಾಟಕದಲ್ಲಿ 1ರು ರೆವಿನ್ಯೂ ಸ್ಟ್ಯಾಂಪ್ನ್ನು ನಿಷೇಧಿಸಲಾಗಿತ್ತು. ಆದರೆ, ಅದನ್ನು ಪುನಾರಂಭ ಮಾಡುವುದು ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರ. ಈ ಕುರಿತು ರಾಜ್ಯ ಸಚಿವ ಸಂಪುಟದಲ್ಲಿ ಚರ್ಚಿಸಬೇಕಾದ ಎಂದು ರಾಜ್ಯ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ನ್ಯಾಯಪೀಠಕ್ಕೆ ತಿಳಿಸಿದರು.
Advertisement