ಪುನೀತವಾಯ್ತು ಕುವೈಟ್
ಕನ್ನಡ ರಾಜ್ಯೋತ್ಸವದ ಹೊತ್ತಲ್ಲಿ ಕರ್ನಾಟಕದಲ್ಲಿ ಇರೋದು ಬಿಟ್ಟು ಸಿನಿಮಾ ತಾರೆಯರು ವಿದೇಶ ಟ್ರಿಪ್ ಹೊಡೀತಾರೆ. ಕನ್ನಡ ಪರ ಹೋರಾಟ ಇದ್ರೂ ಶೂಟಿಂಗ್ ನೆಪ ಹೇಳಿ ಫಾರಿನ್ನಲ್ಲೇ ಉಳೀತಾರೆ ಅಂತೆಲ್ಲ ದೂರುಗಳು ಕೇಳಿರಬಹುದು.
ಆದರೆ ಅದಕ್ಕೆ ಪೂರಕವೆನಿಸುವಂತೆ ಆದರೆ ಅಪವಾದವಾಗಿ ಪವರ್ಸ್ಟಾರ್ ಪುನೀತ್ ಈ ಬಾರಿ ವಿಶಿಷ್ಟ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ ಬಂದಿದ್ದಾರೆ. ಅರಬ್ ದೇಶದಲ್ಲಿ ಕನ್ನಡ ಬಾವುಟ ಹಾರಿಸಿಬಂದಿದ್ದಾರೆ ನಮ್ಮ ಅಪ್ಪು. ಕುವೈಟ್ನ ಕನ್ನಡಿಗರು ಕಳೆದ ಮೂವತ್ತು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದಾರೆ.
ಮೂವತ್ತನೇ ವರ್ಷದ ಆಚರಣೆಗೆ ಯಾರನ್ನು ಕರೆಯೋದ ಅಂತ ಪ್ರಶ್ನೆ ಬಂದಾಗ ಒಮ್ಮತದಿಂದ ಪುನೀತ್ ಬೇಕು ಎಂಬ ಆಸೆ ವ್ಯಕ್ತವಾಗಿದೆ. ಒಂದೇ ಒಂದು ಫೋನ್ ಕರೆಗೆ ಪುನೀತ್ ಇಲ್ಲಿಂದ ಕುವೈಟ್ ತಲುಪಿದ್ದಾರೆ. ವಿಶೇಷವೆದರೆ ಸ್ವಯಿಚ್ಛೆಯಿಂದ ತಮ್ಮ ಪತ್ನಿ ಅಶ್ವಿನಿಯನ್ನೂ ಕರೆದೊಯ್ದಿದ್ದಾರೆ. ಕುವೈಟ್ನ ಕನ್ನಡಿಗರಿಗೆ ಸಂಭ್ರಮ ಹೇಳತೀರದ್ದಾಗಿದೆ. ರಮದ ಎಂಬ ಪಂಚತಾರ ಹೊಟೇಲಿನಲ್ಲಿ ನಡೆದ ಈ ಸಂಭ್ರಮದಲ್ಲಿ ಆರು ಗಂಟೆಗಳಿಗೂ ಹೆಚ್ಚು ಕಾಲ ಪುನೀತ್ ಸಂತೋಷದಿಂದ ಒಡನಾಡಿ ಬಂದಿದ್ದಾರೆ. ಅಲ್ಲಿನ ಕನ್ನಡಿಗರೆಲ್ಲರಿಗೂ ರಾಜ್ಕುಮಾರ್ ಮತ್ತು ತಮ್ಮ ಮೇಲಿರೋ ಅಭಿಮಾನ ಕಂಡು ಮೂಕರಾಗಿದ್ದಾರೆ. ತಾವೇ ವೇದಿಕೆಯೇರಿ ಮಿಲನ ಚಿತ್ರದ ಹಾಡಿಗೆ ನರ್ತಿಸಿ ಒಂದು ಹಾಡನ್ನೂ ಹಾಡಿ ರಂಜಿಸಿದ್ದಾರೆ. ಪುನೀತ್ ಬಂದು ಹೋದ ನಂತರ ಕುವೈಟ್ನ ಕನ್ನಡಿಗರಲ್ಲಿ ರಾಜ್ ಕುಟುಂಬದ ಮೇಲಿನ ಪ್ರೀತಿ ಇನ್ನಷ್ಟು ಗಾಢವಾಗಿದೆಯಂತೆ.
ಪುನೀತ್ ಅಮೆರಿಕಾಗೆ ಹೋದಾಗ ಅಲ್ಲಿನ ಕನ್ನಡಿಗರಿಗೆ ಮಾತಿಗೆ ಸಿಗಲಿಲ್ಲ, ಅಭಿಮಾನಿಗಳಿಂದ ದೂರ ಉಳಿದಿದ್ದರು. ಅಂತೆಲ್ಲ ಹೇಳಿದ್ದನ್ನು ಕೇಳಿದ್ದೆ. ಆದರೆ ಕುವೈಟ್ನಲ್ಲಿ ಅವರನ್ನು ನೋಡಿದಾಗ ಕನ್ನಡದ ಈ ನಂಬರ್ ವನ್ ಸ್ಟಾರ್ ಎಷ್ಟು ಸರಳ ವ್ಯಕ್ತಿತ್ವದವರು ಅನಿಸಿತು. ಅವರು ಸಂಕೋಚದ ಸ್ವಭಾವದವರು ಕೂಡ. ಆದರೆ ಕೆಲವೇ ನಿಮಿಷಗಳಲ್ಲಿ ಎಲ್ಲರೊಳಗೊಂದಾಗಿ ಹೋಗುತ್ತಾರೆ. ನನ್ನೊಂದಿಗೆ ಮಾತನಾಡಿದಾಗ ನನ್ನ ಜಲನಯನ ಮತ್ತು ಬಟಾಣಿ ಚಿಕ್ಕ ಪುಸ್ತಕ ಕೊಟ್ಟೆ. ಎಷ್ಟೋಂದು ಚೆನ್ನಾಗಿ ಕನ್ನಡ ಮಾತನಾಡುತ್ತೀರಿ, ಬರೆಯುತ್ತೀರಿ ಎಂದು ಅಚ್ಚರಿಯಿಂದ ಮಾತನಾಡಿದರು. ಅವರ ವ್ಯಕ್ತಿತ್ವದಲ್ಲಿ ಸಾಕ್ಷಾತ್ ರಾಜ್ ಕುಮಾರ್ ಕಾಣಿಸಿದ್ದು ಹೌದು.
-ಆಜಾದ್ ಐ.ಎಸ್, ಜಲವಿಜ್ಞಾನಿ(ಕುವೈಟ್ ಕನ್ನಡಿಗ)