ಶ್ರೀನಗರ: ಬೀರ್ವಾ ವಿದಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನ ಕಾರ್ಯಕಾರಿ ಅಧ್ಯಕ್ಷ ಒಮರ್ ಅಬ್ದುಲ್ಲ, ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ ೩೭೦ ನೆ ವಿಧಿಯ ಬಗ್ಗೆ ಬಿಜೆಪಿ ಪಕ್ಷ ವಿವಿಧ ಭಾಗಗಳಲ್ಲಿ ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದಕ್ಕೆ ಖಂಡಿಸಿದ್ದಾರೆ.
ಬೀರ್ವಾ ಮತ್ತು ಸೋನಾವರ್ ಈ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಒಮರ್, ಅಬ್ದುಲ್ಲಾ ಕುಟುಂಬದ ಸಾಮಾನ್ಯವಾಗಿ ಸ್ಪರ್ಧಿಸುತ್ತಿದ್ದ ಹಾಗು ತಾವು ೨೦೦೮ ರಲ್ಲಿ ಗೆದ್ದಿದ್ದ ಗಂದೇರ್ ಬಾಲ್ ಕ್ಷೇತ್ರದಿಂದ ಹಿಂದೆ ಸರಿದಿದ್ದಾರೆ.
"೩೭೦ ನೆ ವಿಧಿಯ ಬಗ್ಗೆ ಬಿಜೆಪಿ ಪಕ್ಷದ ಮುಖಂಡರಿಂದ ವಿವಿಧ ವಿರೋಧಾಭಾಸದ ಹೇಳಿಕೆಗಳು ಕೇಳಿಬರುತ್ತಿವೆ. ಇಂತಹ ಸೂಕ್ಷ್ಮ ವಿಷಯದ ಮೇಲೆ ಅವರಿಗೆ ಸ್ಪಷ್ಟತೆ ಇಲ್ಲ" ಎಂದು ನಾಮಪತ್ರ ಸಲ್ಲಿಸಿದ ನಂತರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
"ಜಮ್ಮು ಕಾಶ್ಮೀರದ ಜನ ಪ್ರವಾಹ ಪರಿಹಾರ ನಿಧಿ ಅಥವಾ ಹಣಕ್ಕಾಗಿ ತಮ್ಮ ಅಂತಃಸಾಕ್ಷಿಯನ್ನು ಮಾರಿಕೊಳ್ಳುವುದಿಲ್ಲ ಎಂದು ಬಿಜೆಪಿ ಪಕ್ಷ ತಿಳಿದುಕೊಳ್ಳಬೇಕಾಗಿದೆ. ಬಿಜೆಪಿ ನಮ್ಮ ರಾಜಕೀಯ ಆಕಾಂಕ್ಷೆ, ನಮ್ಮ ವಿಶಿಷ್ಟ ಗುರುತು ಮತ್ತು ಭಾವನೆಗಳನ್ನು ಗೌರವಿಸಬೇಕು" ಎಂದಿದ್ದಾರೆ.
Advertisement