ಚಂಡೀಗಢ: ಹರಿಯಾಣ ಸರ್ಕಾರ ಪದೇ ಪದೆ ತಮ್ಮನ್ನು ವರ್ಗಾವಣೆ ಮಾಡುತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ದಕ್ಷ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರು, ಈ ವರ್ಗಾವಣೆಯಿಂದ ನಿಜಕ್ಕೂ ತುಂಬಾ ನೋವಾಗಿದೆ ಎಂದು ಗುರುವಾರ ಹೇಳಿದ್ದಾರೆ.
'ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಮತ್ತು ಸುಧಾರಣೆ ತರಲು ಸಾಕಷ್ಟು ಶ್ರಮಿಸಿದ್ದೆ. ಆದರೆ ಈಗ ಅಲ್ಲಿಂದಲೂ ವರ್ಗಾವಣೆ ಮಾಡಿರುವುದರಿಂದ ನಿಜಕ್ಕೂ ನೋವಾಗಿದೆ' ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಭೂ ಹಗರಣವನ್ನು ಬಯಲಿಗೇಳೆಯುವ ಮೂಲಕ ಭಾರಿ ಸುದ್ದಿಯಾಗಿದ್ದ ಖೇಮ್ಸಾ ಅವರನ್ನು ಹರಿಯಾಣದ ಕಾಂಗ್ರೆಸ್ ಸರ್ಕಾರ 45 ವರ್ಗಾವಣೆ ಮಾಡಿತ್ತು. ಆದರೆ ಇದೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೂ ಖೇಮ್ಕಾ ಅವರನ್ನು ಮತ್ತೆ ಎತ್ತಂಗಡಿ ಮಾಡಲಾಗಿದೆ.
ಸಾರಿಗೆ ಆಯುಕ್ತರು ಮತ್ತು ಕಾರ್ಯದರ್ಶಿಯಾಗಿದ್ದ ಖೇಮ್ಕಾ ಅವರನ್ನು ನಿನ್ನೆ ರಾತ್ರಿ ಪ್ರಾಚ್ಯ ವಸ್ತುಗಳ ಮತ್ತು ವಸ್ತು ಸಂಗ್ರಹಾಲಯ ಇಲಾಖೆಯ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ.
Advertisement