ಜಮ್ಮು - ಕಾಶ್ಮೀರ: ನಿರಂತರ ಮಳೆಯಿಂದಾಗಿ ಉಂಟಾಗಿರುವ ಭೂಕುಸಿತದಿಂದ ಜಮ್ಮು-ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಸ್ಥಗಿತ ನಾಲ್ಕನೇ ದಿನವೂ ಮುಂದುವರೆದಿದ್ದು, ಸುಮಾರು 600 ಕ್ಕೂ ಹೆಚ್ಚು ಪ್ರಯಾಣಿಕರು ಪರದಾಡುವಂತಹ ಸ್ಥಿತಿ ಎದುರಾಗಿದೆ.
ಭೂಕುಸಿತ ಉಂಟಾಗಿ ಕಳೆದ ಮೂರು ದಿನಗಳಿಂದ ಸುಮಾರು 300 ಕಿ.ಮೀ ಉದ್ದದ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿತ್ತು. ಸತತ ನಾಲ್ಕನೆಯ ದಿನವೂ ಬಂದ್ ಮುಂದುವರೆದಿದ್ದು, ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಮಾರ್ಗಮಧ್ಯೆ ಸಿಲುಕಿಕೊಂಡಿದ್ದಾರೆ.
ನಿರಂತರ ಮಳೆಯಿಂದಾಗಿ ಕಾರ್ಯಾಚರಣೆಗೆ ಹಿನ್ನಡೆಯಾಗುತ್ತಿದ್ದು, ಸಂಚಾರ ದಟ್ಟಣೆ ಸುಗಮಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹೊಸದಾಗಿ ಯಾವುದೇ ವಾಹನಗಳಿಗೆ ಜಮ್ಮು–ಶ್ರೀನಗರ ಹೆದ್ದಾರಿ ಪ್ರವೇಶಿಸಲು ಬಿಡುತ್ತಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಸಂಜಯ್ ಕೊತ್ವಾಲ್ ತಿಳಿಸಿದ್ದಾರೆ.
ಹೆದ್ದಾರಿ ಬಂದ್ ಆಗಿರುವುದರಿಂದ ಸುಮಾರು 700ರಿಂದ 800 ಟ್ರಕ್ಗಳು ಉದ್ದಂಪುರ್, ಬನಿಹಾಲ್, ರಾಮ್ಬನ್ ಸೇರಿದಂತೆ ಜಮ್ಮುವಿನ ವಿವಿಧೆಡೆ ಸಿಕ್ಕಿಹಾಕಿಕೊಂಡಿವೆ.
ಭೂಕುಸಿತದಿಂದಾಗಿ ರಸ್ತೆ ಮಧ್ಯೆ ಮಣ್ಣು ತುಂಬಿದ್ದು, ಅದನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂದು ಸಂಜೆಯೊಳಗೆ ಕಾರ್ಯಾಚರಣೆ ಪೂರ್ಣಗೊಳಿಸಲಾಗುವುದು ಸಂಜಯ್ ಕೊತ್ವಾಲ್ ತಿಳಿಸಿದ್ದಾರೆ.
Advertisement