ಮುಂಬೈ: ಅಕಾಲಿಕ ಮಳೆಯಿಂದ ಆಹಾರ, ಹಣದುಬ್ಬರದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮ ಎಷ್ಟರ ಮಟ್ಟಿಗಾಗಲಿದೆ ಎಂಬುದರ ಸ್ಪಷ್ಟ ಚಿತ್ರಣದ ನಿರೀಕ್ಷೆಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್, ಈ ಹಿಂದಿನ ಬಡ್ಡಿದರ ನೀತಿಯನ್ನು ಯಥಾಸ್ಥಿತಿ ಕಾಯ್ದುಕೊಂಡಿದ್ದು, ಹಿಂದಿನಂತೆಯೆ ರೆಪೊ ದರ 7.5 ರಷ್ಟು ಮುಂದುವರಿಯಲಿದೆ.
‘ಆರ್ಬಿಐ ಎರಡು ಬಾರಿ ಬಡ್ಡಿದರ ಇಳಿಸಿದ ಹಾಗೂ ಸಾಲದ ಬೇಡಿಕೆಯು ದುರ್ಬಲವಾಗಿದ್ದರೂ ಬ್ಯಾಂಕ್ಗಳು, ಬಡ್ಡಿದರ ಇಳಿಕೆ ಮಾಡಿಲ್ಲ. ಆರ್ಬಿಐ ಮಾಡಿದ ಇಳಿಕೆಯನ್ನು ಬ್ಯಾಂಕ್ಗಳು ಗ್ರಾಹಕರಿಗೆ ವರ್ಗಾಯಿಸಿದರೆ ಮತ್ತು ಅಕಾಲಿಕ ಮಳೆಯ ಪರಿಣಾಮದ ಬಗೆಗಿನ ಅಂಕಿಅಂಶಗಳು ದೊರೆತರೆ, ಹಣದುಬ್ಬರ ಏರಿಳಿತದ ಪ್ರಮಾಣ ಅರಿಯಲು ನೆರವಾಗಲಿದೆ. ಅಲ್ಲಿಯ ವರೆಗೂ ಆರ್ಬಿಐ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ’ ಎಂದು 2015–16ನೇ ಸಾಲಿನ ದ್ವೈಮಾಸಿಕ ಆರ್ಥಿಕ ಪರಾಮರ್ಶೆ ನೀತಿಯಲ್ಲಿ ರಾಜನ್ ಸ್ಪಷ್ಟಪಡಿಸಿದ್ದಾರೆ.
ದೇಶದ ಒಟ್ಟಾರೆ ಉತ್ಪನ್ನದ(ಜಿಡಿಪಿ) ಬಗ್ಗೆ ಆಶಾದಾಯಕ ಮಾತುಗಳನ್ನಾಡಿರುವ ಆರ್ಬಿಐ, 2015–16ನೇ ಸಾಲಿನಲ್ಲಿ ಜಿಡಿಪಿ ಅಭಿವೃದ್ಧಿ ದರ 7.8ರಷ್ಟು ಇರಲಿದೆ ಎಂದು ಅಂದಾಜಿಸಿದೆ. 2014–15ರಲ್ಲಿ ಜಿಡಿಪಿ ವೃದ್ಧಿ ದರ 7.5ರಷ್ಟಿತ್ತು.
Advertisement