ನವದೆಹಲಿ: ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಓಕೆ. ಆದರೆ, ಕೇಂದ್ರ ಸಹಾಯಕ ಸಚಿವರು, ಮಾಜಿ ಉಪರಾಷ್ಟ್ರಪತಿಗಳು, ಉಪಮುಖ್ಯಮಂತ್ರಿ ಹಾಗೂ ಸಂಪುಟ ಕಾರ್ಯದರ್ಶಿಗಳಿಗೆ ಯಾಕೆ ಅತಿಗಣ್ಯ ವ್ಯಕ್ತಿ ಸ್ಥಾನಮಾನ ನೀಡಬೇಕು ಎಂದು ವಿಮಾಯಾನ ಸಚಿವಾಲಯ ಪ್ರಶ್ನಿಸಿದೆ.
ಇವರೆಲ್ಲ ಜನಸಾಮಾನ್ಯರಂತೆ ಸರದಿ ಸಾಲಲ್ಲಿ ನಿಂತು ಭದ್ರತಾ ಪರಿಶೀಲನೆಗೆ ಒಳಪಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾಪದಲ್ಲಿ ಸಚಿವಾಲಯ ತಿಳಿಸಿದೆ. ಜನಸಾಮಾನ್ಯರ ಪಾಲಿಗೆ ತಲೆನೋವಾಗಿ ಪರಿಣಮಿಸಿರುವ ವಿಐಪಿ ಸಂಸ್ಕೃತಿಯನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಮಹತ್ವದ ಪ್ರಯತ್ನ ಇದಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ಅನ್ನುವ ಕಾರಣಕ್ಕೆ ರಾಬರ್ಟ್ ವಾದ್ರಾ ಅವರಿಗೂ ವಿಮಾನ ನಿಲ್ದಾಣಗಳಲ್ಲಿ ವಿವಿಐಪಿ ಸ್ಥಾನಮಾನ ನೀಡಲಾಗುತ್ತಿತ್ತು. ಇದಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು.
ನನ್ನ ಹೆಸರು ತೆಗೆದರೆ ಖುಷಿ: ವಾದ್ರಾ ವಿವಿಐಪಿ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಲಾಗುತ್ತಿದೆ ಎನ್ನುವ ವಿಚಾರ ಕೇಳಿ ಖುಷಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹೇಳಿದ್ದಾರೆ.
ಭದ್ರತಾ ಸಂಸ್ಥೆಗಳು ನನಗೆ ಅರಿವಿಲ್ಲದೆ ನನ್ನ ಹೆಸರನ್ನು ಆ ಪಟ್ಟಿಯಲ್ಲಿ ಸೇರ್ಪಡೆ ಮಾಡಿವೆ. ಎಸ್ಪಿಜಿ ಭದ್ರತೆಯಿದ್ದಾಗ ಮಾತ್ರ ನನ್ನ ಪೂರ್ವ ತಪಾಸಣೆ ಕೈಬಿಡಲಾಗುತ್ತದೆ. ಈಗಿರುವ ನನ್ನ ಭದ್ರತಾ ಸಿಬ್ಬಂದಿಯನ್ನು ಏರ್ಪೋರ್ಟ್ನೊಳಗೆ ಪ್ರವೇಶಿಸಲೂ ಬಿಡುವುದಿಲ್ಲ. ಇದಕ್ಕೆ ಎಲ್ಲ ಏರ್ ಪೋರ್ಟ್ಗಳಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳೇ ಸಾಕ್ಷಿ. ಇದರಿಂದಲಾದರೂ ನನಗೆ ನೀಡಲಾಗುತ್ತಿರುವ ವಿಶೇಷ ಸ್ಥಾನಮಾನದ ಸುತ್ತ ಸುತ್ತಿಕೊಂಡಿರುವ ವಿವಾದಗಳಿಗೆ ಅಂತ್ಯಬೀಳಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
Advertisement