ಬರ್ಲಿನ್: ಜರ್ಮನಿ ಮತ್ತು ಭಾರತ ಜಂಟಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಡಲಿದೆ ಎಂದು ತ್ರೀರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಜರ್ಮನಿ ಪ್ರವಾಸ ಕೊನೆಯ ದಿನವಾದ ಇಂದು ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸೆಲರ್ ಎಂಜೆಲಾ ಮಾರ್ಕೆಲ್ ಅವರು ಬರ್ಲಿನ್ ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಮೋದಿ, ಭಯೋತ್ಪಾದನೆ ಹತ್ತಿಕ್ಕಲು ಉಭಯ ದೇಶಗಳು ಚರ್ಚಿಸಿವೆ.
ಭಯೋತ್ಪಾದನೆ ವಿರುದ್ಧ ಸಮರ ಸಾರಲು ಎರಡು ದೇಶಗಳು ಕೈಜೋಡಿಸಿದ್ದು, ಆಫ್ಘನ್ ನಲ್ಲಿ ಶಾಂತಿ ನೆಲೆಸಲು ಸಹಾಯ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಯೋತ್ಪಾದನೆ ವಿಶ್ವದ ದೊಡ್ಡ ಪಿಡುಗಾಗಿದ್ದು, ಮಾನವತೆಯನ್ನು ಮರೆತು ನಡೆಸುವಂತಹ ದುಷ್ಕೃತ್ಯವಾಗಿದೆ. ಇದನ್ನು ಎಲ್ಲಾ ದೇಶಗಳು ಒಟ್ಟಾಗಿ ಅಳಿಸಬೇಕು ಎಂದು ಮೋದಿ ಹೇಳಿದ್ದಾರೆ.
ಭಾರತ ಜರ್ಮನಿ ಭವಿಷ್ಯದ ಕುರಿತು ಚರ್ಚೆ ನಡೆಸಲಾಗಿದ್ದು, ಜರ್ಮನಿ ಉದ್ಯಮಿಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಹ್ವಾನಿಸಲಾಗಿದೆ. ಉದ್ಯಮಿಗಳಿಗಾಗಿ ಭಾರತದಲ್ಲಿ ಅನುಕೂಲಕರ ವಾತಾವರಣ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಭಾರತದಲ್ಲಿ ಉತ್ಪಾದನಾ ಹಬ್ ನಿರ್ಮಿಸಲಾಗವುದು. ಅಲ್ಲದೇ ನವೀಕರಿಸಬಹುದಾದ ಇಂಧನಗಳ ಉತ್ಪಾದನೆಗೆ ಸಹಕಾರ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಜರ್ಮನಿ ಪ್ರವಾಸ ಅಂತ್ಯಗೊಂಡಿದ್ದು, ಜರ್ಮನಿ ಜನತೆಗೆ ಹಾಗೂ ಮಾರ್ಕೆಲ್ ಅವರಿಗೆ ಅಭಿನಂದಿಸುತ್ತೇನೆ. ಜರ್ಮನಿ ದೇಶದಿಂದ ನಾವು ಬಹಳಷ್ಟು ಕಲಿಯಬಹುದು. ಇಡೀ ವಿಶ್ವದಲ್ಲೇ ಕೌಶಲ್ಯ ಅಭಿವೃದ್ಧಿಯಲ್ಲಿ ಜರ್ಮನಿ ನಂ.1 ದೇಶವಾಗಿದೆ ಎಂದು ಮೋದಿ ಶ್ಲಾಘಿಸಿದ್ದಾರೆ.
Advertisement