ನವದೆಹಲಿ: ಭಾರತದ ಜತೆ ಸೌಹಾರ್ದ ಸಂಬಂಧದ ಬಗ್ಗೆ ಮರುಳು ಮಾಡಿ, ಬೆನ್ನಿಗೆ ಇರಿಯುವುದು ಚೀನಾ ಚಾಳಿ. ನೆರೆಯ ರಾಷ್ಟ್ರದ ಈ ಕುಕೃತ್ಯಕ್ಕೆ ನಿಯಂತ್ರಣ ಹೇರಲು ಈಗ ಆರ್ ಎಸ್ಎಸ್ ಮುಂದಾಗಿದೆ.
ಗಡಿ ಪ್ರದೇಶಗಳಲ್ಲಿನ್ನು ಎಳೆಯಲ್ಲಿಯೇ ತರಬೇತಿಗೊಳಿಸುವುದೇ ಸಂಘದ ಉದ್ದೇಶ. ವಿಶೇಷವಾಗಿ ಉತ್ತರಾಖಂಡಕ್ಕೆ ಹೊಂದಿಕೊಂಡು ಇರುವ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಜಿಲ್ಲೆ ಮತ್ತು ಬ್ಲಾಕ್ ಗಳಲ್ಲಿ ಸಾಮಾಜಿಕ ಜ್ಞಾನಾಂದೋಲನ ಆರಂಭಿಸಲು ಮುಂದಾಗಿದೆ. ಈ ಮೂಲಕ ಚೀನಾ ಭಾರತದ ವಿರುದ್ಧ ನಡೆಸುತ್ತಿರುವ ಛಾಯಾ ಸಮರದ ವಿರುದ್ಧ ಎಳೆವೆಯಲ್ಲಿಯೇ ಜಾಗೃತಿ ಮೂಡಿಸಲು ಮುಂದಾಗಿದೆ. ಈ ಮೂಲಕ ಆರ್ ಎಸ್ಎಸ್ ತನ್ನ ಕಾರ್ಯ ಚಟುವಟಿಕೆಗಳ ವ್ಯಾಪ್ತಿಯನ್ನೂ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ.
ಅದಕ್ಕೆ ಪೂರ್ವಭಾವಿಯಾಗಿ ಉತ್ತರಾಖಂಡದ ಕೇದಾರ ಕಣಿವೆ ವ್ಯಾಪ್ತಿಯಲ್ಲಿ ಇಂಥ ಕೆಲಸಕಾರ್ಯ ಆರಂಭವವಾಗಿದೆ. ಹಲವೆಡೆ ಹಾಸ್ಟೆಲ್ ಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಮಾತ್ರವಲ್ಲದೆ ಹೊಸ ಸ್ಥಳಗಳಲ್ಲಿ ಹಾಸ್ಟೆಲ್ ಗಳು, ಶಾಲೆಗಳ ನಿರ್ಮಾಣಕ್ಕೆ ಸೂಕ್ತ ಜಮೀನನ್ನು ಶೋಧಿಸಲಾಗುತ್ತದೆ ಎಂದು ಆರ್ ಎಸ್ ಎಸ್ ಮೂಲಗಳು ಹೇಳಿವೆ.
ಆಸ್ಪತ್ರೆಗಳಿಗೆ ಕಾಯಕಲ್ಪ
ಇದರ ಜತೆಗೆ ಸಂಘಟನೆ ಈಗಾಗಲೇ ನಡೆಸುತ್ತಿರುವ ವೈದ್ಯಕೀಯ ಕೇಂದ್ರಗಳನ್ನು ಮೇಲ್ಜರ್ಜೆಗೆ ಏರಿಸಲು ಮುಂದಾಗಿದೆ. ಆರೋಗ್ಯ ರಕ್ಷಕ್ ಯೋಜನೆ ವ್ಯಾಪ್ತಿಯಲ್ಲಿ ಅದನ್ನು ನಡೆಸುತ್ತಿದೆ.
ಧಾರ್ ಚುಲಾ, ಗಂಗೋತ್ರಿ, ಯಮುನೋತ್ರಿ, ಪಿತೌರಾಗಡ, ಚಮೋಲಿ, ಉತ್ತರಕಾಶಿ, ರುದ್ರ ಪ್ರಯಾಗ, ಬದರಿನಾಥ ಪ್ರದೇಶಗಳಲ್ಲಿ ಸಂಚಾರಿ ವೈದ್ಯಕೀಯ ಘಟಕಗಳು ಮತ್ತು ಆಸ್ಪತ್ರೆಗಳಲ್ಲಿ ಶೀಘ್ರದಲ್ಲೇ ಆರಂಭಿಸಲು ಆರ್ ಎಸ್ಎಸ್ ಮುಂದಾಗಿದೆ.
ಈ ಮೂಲಕ ಸ್ಥಳೀಯ ಜನರಿಗೆ ಸುಲಭವಾಗಿ ಅಗತ್ಯ ಆರೋಗ್ಯ ಸೌಲಭ್ಯ ಸಿಗುವಂತಾಗಿ, ಜನರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಿದೆ ಆರ್ಎಸ್ಎಸ್, ಏಕೆಂದರೆ ಚೀನಾ ಗಡಿಗುಂಟ ಇರುವ ಕೆಲ ಪ್ರದೇಶಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಇದೇ ನೆಪವನ್ನು ಮುಂದಿಟ್ಟುಕೊಂಡು ಭಾರತದ ಈ ಪ್ರದೇಶಗಳನ್ನು ತನ್ನದೆಂದು ಹೇಳುವ ಚೀನಾದ ಸಂಭಾವ್ಯ ಯತ್ನ ಹತ್ತಿಕ್ಕುವ ಯತ್ನವೂ ಆರ್ಎಸ್ಎಸ್ ನದ್ದು.
30 ಹಾಸ್ಟೆಲ್ ಗಳು
ಅಂದ ಹಾಗೆ ಇಂಥ ಹಾಸ್ಟೆಲ್ ಗಳನ್ನು ನಡೆಸುತ್ತಿರುವುದು ಸಂಘಕ್ಕೆ ಹೊಸತೇನೂ ಅಲ್ಲ. ಈ ಪ್ರದೇಶದಲ್ಲಿ 30 ಸಂಸ್ಥೆಗಳನ್ನು ನಡೆಸುತ್ತಿದೆ. ಏಕ ಉಪಾಧ್ಯಾಯ ಶಾಲೆಯ ಮಾದರಿಯಲ್ಲಿ ಅದನ್ನು ನಡೆಸಲಾಗುತ್ತಿದೆ.
ಮಾತನಲ್ಲಿ ಅರಮನೆ ಕಟ್ಟುವುದರಲ್ಲಿ ಚೀನಾ ಎದುರು ಯಾವ ರಾಷ್ಟ್ರಕ್ಕೂ ಸಾಟಿ ಇಲ್ಲ. ಹೀಗಾಗಿ ಸರ್ಕಾರದ ಜತೆಗೆ ಗಡಿ ಪ್ರದೇಶದಲ್ಲಿ ಭದ್ರತೆ ಜತೆಗೆ ಸಾಮಾಜಿಕ ತಿಳುವಳಿಕೆ ಮೂಡಿಸಲು ಮುಂದಾಗಿರುವುದೂ ಶ್ಲಾಘನೀಯ ಕೆಲಸ. ಏಕೆಂದರೆ ರಾಷ್ಟ್ರ ಭಾವನೆ ಬಗ್ಗೆ ಎಳೆವೆಯಲ್ಲಿಯೇ ಜಾಗೃತಿ ಅಗತ್ಯ.
Advertisement