ನವದೆಹಲಿ: ಆಮ್ ಆದ್ಮಿ ಪಕ್ಷ ವಿಧಾನಸಭೆ ಚುನಾವಣೆ ವೇಳೆ ನೀಡಿದ್ದ ಭರವಸೆಗಳ ಪೈಕಿ ಶೇ. 50ರಷ್ಟು ಭರವಸೆಗಳನ್ನು ಈಡೇರಿಸಿದ್ರೂ ತಮಗೆ ಸಂತಸ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಹೇಳಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರಕ್ಕೇರಿ 2 ತಿಂಗಳ ಬಳಿಕ ನಾಗರಿಕ ಸೇವಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೇಜ್ರಿವಾಲ್, ಐದು ವರ್ಷಗಳಲ್ಲಿ ದೆಹಲಿ ಸರ್ಕಾರ ಶೇ. 50ರಷ್ಟು ಭರವಸೆಗಳನ್ನು ಈಡೇರಿಸುವುದು ಸಹ ಕೆಟ್ಟದ್ದೇನಲ್ಲ. ಶೇ.50ರಷ್ಟು ಭರವಸೆ ಈಡೇರಿಸಿದರೂ ತಮಗೆ ಸಂತಸ ಎಂದು ಹೇಳಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಅಧಿಕಾರಿಗಳ ಜೊತೆ ನಿರ್ವಹಿಸಿದ ಕಾರ್ಯ ಉತ್ತಮ ಅನುಭವ ತಂದಿದೆ ಎಂದರು. ದೆಹಲಿಯಲ್ಲಿ ಪಾರದರ್ಶಕ ಆಡಳಿತ ನೀಡಲು ಹಂತಹಂತವಾಗಿ ಪ್ರಯತ್ನಿಸಲಾಗುವುದು. ಅಧಿಕಾರಿಗಳು ಜನತೆಗೆ ಉತ್ತಮ ಸೇವೆ ಒದಗಿಸಲು ಪ್ರಯತ್ನಸಬೇಕು ಎಂದರು. ಜೊತೆಗೆ ಅಧಿಕಾರಿಗಳು ಉತ್ತಮ ಕೆಲಸ ಮಾಡುವಂತೆ ಪ್ರೋತ್ಸಾಹಿಸಲು ಅವರಿಗೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಜನತೆ ತಮ್ಮ ಪಕ್ಷದ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಒಂದು ವೇಳೆ ಮುಂದಿನ ಐದು ವರ್ಷಗಳಲ್ಲಿ ಶೇ. 100ರಷ್ಟು ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೆ, ಶೇ.50ರಷ್ಟು ಭರವಸೆಗಳನ್ನು ಖಂಡಿತ ಈಡೇರಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು. ಅಲ್ಲದೆ ಆಡಳಿತದಲ್ಲಿ ವ್ಯವಸ್ಥಿತ ಬದಲಾವಣೆ ತರುವಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದಿದೆ ಎಂದರು.
Advertisement