ಪುಣೆ: ಶಿವಸೇನೆಯ ತೀವ್ರ ವಿರೋಧದ ನಂತರ ಏಪ್ರಿಲ್ 25ರಂದು ಪುಣೆಯ ಹಡಪ್ಸರ್ನಲ್ಲಿ ನಡೆಯಬೇಕಿದ್ದ ಪಾಕಿಸ್ಥಾನದ ಗಾಯಕ ಅತೀಫ್ ಅಸ್ಲಂ ಅವರ ನೇರ ಸಂಗೀತ ಕಾರ್ಯಕ್ರಮವನ್ನು ಅದನ್ನು ರದ್ದು ಮಾಡಲಾಗಿದೆ.
ನಮ್ಮ ರಾಷ್ಟ್ರಕ್ಕೆ ಮೊದಲು ಮಹತ್ವ ಕೋಡಬೇಕು ಎಂದು ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರು ಹೇಳುತ್ತಿದ್ದರು. ಆದ್ದರಿಂದ ಬಹಳ ವಿಚಾರ ಮಾಡಿ ಈ ನೇರ ಸಂಗೀತ ಕಾರ್ಯಕ್ರಮವನ್ನು ರದ್ದು ಮಾಡುತ್ತಿದ್ದೇವೆ ಎಂದು ಕಾರ್ಯಕ್ರಮದ ಸಂಚಾಲಕರೆನಿಸಿದ ಸಂಜಯ್ ಸಾಠೆ ಅವರು ಹೇಳಿದ್ದಾರೆ.
ಸಂಗೀತ ಕಾರ್ಯಕ್ರಮವನ್ನು ಶಿವಸೇನೆಯು ವಿರೋಧಿಸಿದಲ್ಲದೆ ಇದನ್ನು ಪುಣೆಯಲ್ಲಿ ನಡೆಸಬಾರದೆಂದು ಬೆದರಿಕೆ ಒಡ್ಡಿತ್ತು. ಇದಕ್ಕೆ ಸಂಬಂಧಿಸಿದಂತೆ ಶಿವಸೇನೆಯ ನಾಯಕ ಮಹಾದೇವ್ ಬಾಬರ್ ಅವರು, ಹಿಂದಿನಿಂದಲು ಶಿವಸೇನೆಯು ಪಾಕಿಸ್ತಾನದ ಮತ್ತು ಅಲ್ಲಿಂದ ಬರುವ ಕಲಾವಿದರ ವಿರುದ್ಧವಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿ ನಮ್ಮ ಬೆನ್ನಿಗೆ ಚೂರಿ ಇರಿಯುತ್ತಾರೆ ಅಂತವರ ಕಾರ್ಯಕ್ರಮವನ್ನು ಹೇಗೆ ಬೆಂಬಲಿಸಬೇಕು ಎಂದಿದ್ದಾರೆ.
ಇದುವರೆಗೆ ಈ ಕಾರ್ಯಕ್ರಮದ ಒಂದು ಸಾವಿರಕ್ಕಿಂತ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ. ಎಲ್ಲ ಟಿಕೆಟ್ಗಳ ದುಡ್ಡನ್ನು ಆಯಾ ಟಿಕೆಟುದಾರರಿಗೆ ಹಿಂದಿರುಗಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
Advertisement