ಬೆಳಗಾವಿ: ರಾಜ್ಯದ ಸಮಸ್ಯೆಗೆ ಕನ್ನಡಿಗರೆಲ್ಲರೂ ಒಂದಾಗಿ ಹೋರಾಡಬೇಕೇ ಹೊರತು ಪ್ರತ್ಯೇಕತೆಯ ಮಾತು ಎತ್ತಬಾರದು ಎಂದು ನಟ ಡಾ. ಶಿವರಾಜಕುಮಾರ್ ಪ್ರತ್ಯೇಕ ರಾಜ್ಯದ ಕೂಗು ಹಾಕುವ ನಾಯಕರಿಗೆ ಮನವಿ ಮಾಡಿದ್ದಾರೆ.
ನಗರದ ಸಿಪಿಎಡ್ ಮೈದಾನದಲ್ಲಿ ಭಾನುವಾರ ಜಿಲ್ಲಾ ಕಲಾ ಕಂಠೀರವ ಡಾ. ಶಿವರಾಜಕುಮಾರ ಅಭಿಮಾನಿಗಳ ಸಂಘದ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಡಾ. ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ನೇತ್ರದಾನ ಶಿಬಿರ ಮತ್ತು ಅಂಗವಿಕಲರಿಗೆ ಕೋಲು ವಿತರಣೆ ಸಮಾರಂಭದ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದರು.
ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವುದಕ್ಕೆ ಅವಕಾಶ ನೀಡಬಾರದು. ಅಖಂಡ ಕರ್ನಾಟಕಕ್ಕೆ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು. ಇನ್ನು ಮುಂದೆ ಉತ್ತರ ಕರ್ನಾಟಕದ ಯಾವುದೇ ಸಮಸ್ಯೆಗೂ ಚಿತ್ರನಟರ ಪರ ನಾವು ಹೋರಾಟಕ್ಕೆ ನಿಲ್ಲುತ್ತೇವೆ. ರಾಜ್ಯ ಒಡೆಯುವ ಮಾತನಾಡುವ ನಾಯಕರಲ್ಲಿ ಮನವಿ ಮಾಡುತ್ತೇನೆ. ನಾವು ಒಂದಾಗಿ ಹೋರಾಟ ಮಾಡೋಣ. ಪ್ರತ್ಯೇಕತೆ ಮಾತು ಮರೆಯೋಣ.
ಮೇಕೆದಾಟು, ಕಾವೇರಿ ಮತ್ತು ಕಳಸಾ ಬಂಡೂರಿ, ಕೃಷ್ಣಾ ಯೋಜನೆಗಳ ವಿಚಾರದಲ್ಲಿ ಕನ್ನಡಿಗರು ಒಬ್ಬರಿಗೊಬ್ಬರು ಚಿಕ್ಕಮಕ್ಕಳಂತೆ ಗಲಾಟೆ ಮಾಡಿಕೊಳ್ಳುವುದು ಸರಿಯಲ್ಲ. ಎಲ್ಲರೂ ಒಂದಾಗಿದ್ದರಷ್ಟೇ ಹೋರಾಟಕ್ಕೆ ಶಕ್ತಿ. ಕಳಸಾ ಬಂಡೂರಿ ಹೋರಾಟಕ್ಕೆ ನನ್ನ ಬೆಂಬಲವಿದೆ. ನೀವು ಕರೆದರೆ ನಾನು ಬಂದೇ ಬರುತ್ತೇನೆ. ಬಾರದಿದ್ದರೆ ಮನೆಗೆ ಬಂದು ಎಳೆದುಕೊಂಡು ಬನ್ನಿ ಎಂದು ಶಿವರಾಜ್ ಕುಮಾರ್ ತಿಳಿಸಿದರು.
Advertisement