ನವದೆಹಲಿ: ಲೇಖಕಿ ಶೋಭಾ ಡೇ ಅವರ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದ ಖಂಡನಾ ನಿಲುವಳಿ ಸೂಚನೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ಮಹಾರಾಷ್ಟ್ರ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಶಿವಸೇನೆ ನೇತೃತ್ವದಲ್ಲಿ ಶೋಭಾ ಡೇ ಅವರ ವಿರುದ್ಧ ಖಂಡನಾ ನಿರ್ಣಯ ಮಂಡಿಸಲಾಗಿತ್ತು. ಇದನ್ನು ಲೇಖಕಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್, ಖಂಡನಾ ನಿರ್ಣಯಕ್ಕೆ ತಡೆ ನೀಡಿದೆ. ಅಲ್ಲದೆ ಈ ಸಂಬಂಧ ಮಹಾರಾಷ್ಟ್ರ ವಿಧಾನಸಭೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ರಾಜ್ಯದ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರೈಂಟೈಮ್ ಅಂದರೆ ಸಂಜೆ 6ರಿಂದ 9ಗಂಟೆ ಅವಧಿಯಲ್ಲಿ ಕೇವಲ ಮರಾಠಿ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸಬೇಕೆಂಬ `ಮಹಾ' ಸರ್ಕಾರದ ಆದೇಶವನ್ನು ಶೋಭಾ ಡೇ ಟೀಕಿಸಿದ್ದರು. ಫಡ್ನವಿಸ್ ಅವರನ್ನು `ದಿಕ್ತಟ್ ವಾಲಾ', ಸರ್ಕಾರದ ಕ್ರಮವನ್ನು `ದಾದಾಗಿರಿ' ಎಂದು ಟ್ವಿಟರ್ನಲ್ಲಿ ತೀವ್ರವಾಗಿ ಟೀಕಿಸಿದ್ದರು.
ಆದರೆ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದ ಬಿಜೆಪಿ ಹಾಗೂ ಶಿವಸೇನೆ ಮುಖಂಡರು ಶೋಭಾ ಡೇ ವಿರುದ್ಧ ಖಂಡನಾ ನಿಲುವಳಿ ಮಂಡಿಸಿದ್ದರು. ಶೋಭಾ ಡೇ ಟ್ವೀಟ್ಗಳು ಮಹಾರಾಷ್ಟ್ರದ ಜನತೆಯನ್ನು ಅವಮಾನಿಸಿದೆ ಎಂದು ಶಿವಸೇನೆ ಶಾಸಕ ಪ್ರತಾಪ್ ಸರನಾಯಕ್ ಹೇಳಿದ್ದರು ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ರನ್ನು ಲೇವಡಿ ಮಾಡಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದೂ ಅವರು ಒತ್ತಾಯಿಸಿದ್ದರು.
Advertisement