ಚಂಡೀಗಡ: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಹಾಗೂ ಕಾನೂನಿನ ಪ್ರಕಾರ ಅವರು ಕ್ರಿಮಿನಲ್ ಗಳು ಎಂದು ಹರಿಯಾಣದ ಕೃಷಿ ಸಚಿವ ಒ.ಪಿ.ಧಂಕರ್ ಬುಧವಾರ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಪ್ರಕಾರ ಆತ್ಮಹತ್ಯೆ ಅಪರಾಧವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯ ಸಾವಿಗೆ ಆತನೇ ಜವಾಬ್ದಾರಿಯಾಗಿರುತ್ತಾನೆ. ಹೇಡಿತನದಿಂದ ಆತ್ಮಹತ್ಯೆ ಮಾಡಿಕೊಂಡಿರುವ ರೈತನ ಸಾವಿಗೆ ಸರ್ಕಾರ ಕಾರಣವಲ್ಲ.
ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಕಾನೂನಿನ ಪ್ರಕಾರ ಕ್ರಿಮಿನಲ್ ಗಳು. ಆದ್ದರಿಂದ ಸರ್ಕಾರ ಆತ್ಮಹತ್ಯೆ ಮಾಡಿಕೊಳ್ಳುವ ರೈತರಿಗೆ ಯಾವುದೇ ರೀತಿಯ ಬೆಂಬಲ ನೀಡಬಾರದು ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರತಿಪಕ್ಷವನ್ನು ಆರೋಪಿಸಿಲು ಮುಂದಾಗ ಧಂಕರ್ ಈ ಹಿಂದಿದ್ದ ಯುಪಿಎ ಸರ್ಕಾರ ರೈತರ ಪರವಾಗಿ ಯಾವುದೇ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಹೀಗಾಗಿ ಕಾಂಗ್ರೆಸ್ ಅವಧಿಯಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗಿತ್ತು ಎಂದು ಆರೋಪಿಸಿದ್ದಾರೆ.
ಒ.ಪಿ. ಧಂಕರ್ ಅವರ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಒ.ಪಿ ಧಕಂರ್ ಅವರ ಈ ಹೇಳಿಕೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಓರ್ವ ಕೃಷಿ ಸಚಿವರಾಗಿ ರೈತರ ಪರವಾಗಿ ನೀಡಿರುವ ಈ ಹೇಳಿಕೆ ಖಂಡನೀಯ. ಅಧಿಕಾರದಲ್ಲಿರುವ ಒಬ್ಬ ಸಚಿವನ ಈ ರೀತಿಯ ಹೇಳಿಕೆ ಬಿಜೆಪಿಯ ರೈತರ ಪರವಾಗಿರುವ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಸಂಯುಕ್ತ ಜನತಾದಳದ ನಾಯಕ ಕೆ.ಸಿ ತ್ಯಾಗಿ ಹೇಳಿದ್ದಾರೆ.
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹತಾಶೆ ಭಾವದಿಂದ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ರೈತರ ಪರವಾಗಿ ಸರ್ಕಾರ ಬಹಳ ಸೂಕ್ಷ್ಮದಿಂದ ಕೆಲಸ ನಿರ್ವಹಿಸಬೇಕು ಎಂದು ಬಿ.ಜೆ ಪಾಂಡ ಹೇಳಿದ್ದಾರೆ.
ರಾಜಸ್ತಾನ ಮೂಲದ ರೈತ 41 ವರ್ಷದ ಗಜೇಂದ್ರ ಸಿಂಗ್ ಎಂಬುವವರು ಭೂಮಸೂದೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಆಮ್ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸುತ್ತಿದ್ದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಮತ್ತಿತರ ನಾಯಕರ ಎದುರೇ ಆತ್ಮಹತ್ಯೆಗೆ ಶರಣಾಗಿದ್ದ. ಈ ಸುದ್ದಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ರಾಜಕೀಯವಲಯದಲ್ಲಿ ಕೆಸರೆರಚಾಟಕ್ಕೆ ದಾರಿ ಮಾಡಿಕೊಟ್ಟಿದೆ.
Advertisement