ಬರ್ಪಾಕ್, ನೇಪಾಳ: ಗೂರ್ಖಾ ಜನಾಂಗದವರ ಕೇಂದ್ರ ಸ್ಥಾನವಾಗಿದ್ದ ನೇಪಾಳದ ಬರ್ಪಾಕ್ ಗ್ರಾಮ ಈಗ ಸಂಪೂರ್ಣ ಸ್ತಬ್ಧ. ಭೂಕಂಪದಿಂದ ಜರ್ಜರಿತವಾಗಿರುವ ಹಿಮಾಲಯ ತಪ್ಪಲಿನ ಈ ಗ್ರಾಮವನ್ನು ತಲುಪಲು ಭಾರತೀಯ ಸೇನೆಗೆ ಮೂರು ದಿನ ಹಿಡಿದಿದೆ. ಆದರೆ ಒಮ್ಮೆ ತಲುಪುತ್ತಿದ್ದಂತೆಯೇ ಕಾರ್ಯಪ್ರವೃತ್ತವಾಗಿರುವ ಸೇನೆ, ಪ್ರಥಮ ಚಿಕಿತ್ಸೆ, ಔಷಧೋಪಚಾರ ಇತ್ಯಾದಿಗಳನ್ನು ಭರದಿಂದ ಒದಗಿಸುತ್ತಿದೆ.
ಬರ್ಪಾಕ್ ಗ್ರಾಮ ತಲುಪಿದ ಕ್ಷಣದಿಂದ ಒಂದೇ ಒಂದು ನಿಮಿಷವೂ ವಿಶ್ರಮಿಸದೆ ಸೇವಾಕಾರ್ಯದಲ್ಲಿ ತೊಡಗಿರುವ ಮೇಜರ್ ಸಂಧ್ಯಾ ನೇತೃತ್ವದ ಪಡೆಯ ಮುಂದೆ ಗಾಯಗೊಂಡಿರುವ, ಉಸಿರಾಟದ ತೊಂದರೆಗೆ ಒಳಗಾಗಿರುವ, ಒಳಪೆಟ್ಟು ತಿಂದಿರುವ ಸಂತ್ರಸ್ತರು ಕ್ಯೂ ನಿಂತಿದ್ದಾರೆ.
ಬದುಕುಳಿದವರಲ್ಲಿ ಹಲವರು ಮಾನಸಿಕ ಖಿನ್ನತೆಗೆ, ಶಾಕ್ಗೆ ಒಳಗಾಗಿದ್ದಾರೆಂದು ಮೇಜರ್ ಸಂಧ್ಯಾ ತಿಳಿಸಿದ್ದಾರೆ.
ಭೀಕರ ಭೂಕಂಪದ ಬಳಿಕ ಬರ್ಪಾಕ್ ಗ್ರಾಮ ವಿನಾಶದ ವೈಭವೀಕೃತ ಚಿತ್ರಣದಂತೆ ಕಾಣುತ್ತಿದ್ದು, ತಮ್ಮವರನ್ನು ಕಳೆದುಕೊಂಡ ಕುಟುಂಬದವರು, ಮಾನಸಿಕವಾಗಿ ತೀವ್ರ ಘಾಸಿಗೊಂಡಿದ್ದು ನಡುರಾತ್ರಿಯಲ್ಲೆಲ್ಲ ಎದ್ದು ಕುಸಿದ ಕಟ್ಟಡಗಳ ಅಡಿಯಲೆಲ್ಲ ಹುಡುಕಾಟ ನಡೆಸುತ್ತಿರುವುದು ಕಂಡು ಬಂದಿದೆ.
ರಕ್ಷಣಾ ಪಡೆ ತಲುಪುವ ಮೊದಲೇ ಸ್ಥಳೀಯರು ಹೆಣಗಳನ್ನು ಆಚೆಗೆಳೆದದ್ದಲ್ಲದೇ, ಕಟ್ಟಡಗಳ ಅಡಿಯಿಂದ ಕಂಬಳಿ, ಬೆಡ್ಶೀಟು, ಗ್ಯಾಸ್ ಸಿಲಿಂಡರ್, ಪುಡಿಯಾದ ಟಿವಿ ಇತ್ಯಾದಿಗಳನ್ನು ಹೊರಗೆ ಎಳೆದು ತಂದಿಟ್ಟಿದ್ದಾರೆ.
ಬರ್ಪಾಕ್ ಗ್ರಾಮ ಮೊದಲಿನಿಂದಲೂ ಭಾರತದ ಸೇನೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಸಾವಿರಾರು ಗೂರ್ಖಾ ಯುವಕರು ಭಾರತೀಯ ಸೇನೆ ಹಾಗೂ ಬ್ರಿಟಿಷ್ ಸೇನೆಯೊಂದಿಗೆ ತಮ್ಮ ನಿಕಟ ಸಂಪರ್ಕ ಹೊಂದಿರುವ ಉದಾಹರಣೆಗಳಿವೆ. ಅಂಥ ಗ್ರಾಮವೀಗ ಸ್ಮಶಾನಸದೃಶವಾಗಿದೆ.
Advertisement