ಇಸ್ಲಾಮಾಬಾದ್: 2008 ರಲ್ಲಿ ಮುಂಬೈ ನಲ್ಲಿ ಭಯೋತ್ಪಾದಕರ ದಾಳಿ ನಡೆಸಲು ಭಯೋತ್ಪಾದಕರನ್ನು ಭಾರತಕ್ಕೆ ಕಳಿಸಿದ್ದ ಪಾಕಿಸ್ತಾನ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಪಾಕಿಸ್ತಾನದ ನಿವೃತ್ತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮುಂಬೈ ದಾಳಿ ಕುರಿತು ತನಿಖೆ ನಡೆಸಿದ್ದ ಫೆಡರಲ್ ತನಿಖಾ ಸಂಸ್ಥೆಯ ಮಾಜಿ ಮಹಾನಿರ್ದೇಶಕ ತಾರಿಕ್ ಖೋಸಾ, ಪಾಕ್ ನ ಡಾನ್ ಪತ್ರಿಕೆಯಲ್ಲಿ ಲೇಖನ ಬರೆದಿದ್ದು ತನ್ನ ನೆಲದಲ್ಲೇ ರೂಪುಗೊಂಡು ಅಲ್ಲಿಂದಲೇ ನಡೆದ ಮುಂಬೈ ದಾಳಿಯ ಅಪರಾಧಿಗಳನ್ನು ಪಾಕಿಸ್ತಾನ ಶಿಕ್ಷೆಗೊಳಿಸಬೇಕಿದೆ ಎಂದು ಹೇಳಿದ್ದಾರೆ. ಇದು ಸಾಧ್ಯವಾಗಬೇಕಾದರೆ ಪಾಕಿಸ್ತಾನ ಸತ್ಯ ಹಾಗೂ ತಪ್ಪುಗಳನ್ನು ಒಪ್ಪಿಕೊಳ್ಳಬೇಕು ಎಂದು ಖೊಸ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ದಾಳಿ ಯೋಜನೆಯ ರುವಾರಿಗಳನ್ನು ಶಿಕ್ಷಿಸುವುದಕ್ಕೆ ಪಾಕಿಸ್ತಾನ ಭದ್ರತಾ ವ್ಯವಸ್ಥೆ ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ ಈ ಮೂಲಕ ಮುಂಬೈ ದಾಳಿಯ ಸಂತ್ರಸ್ತರಿಗೆ ಪಾಕಿಸ್ತಾನ ನ್ಯಾಯ ಒದಗಿಸಬೇಕು ಎಂದು ಪಾಕಿಸ್ತಾನದ ಮಾಜಿ ಅಧಿಕಾರಿ ತಾರಿಕ್ ಖೋಸಾ ಆಗ್ರಹಿಸಿದ್ದಾರೆ. ಮುಂಬೈ ದಾಳಿಯ ತನಿಖೆಯನ್ನು ವಿಳಂಬ ಮಾಡಲಾಗುತ್ತಿದೆ ಎಂದೂ ತಾರಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2008 ರಲ್ಲಿ ಭಾರತಕ್ಕೆ ನುಗ್ಗಿದ್ದ ಉಗ್ರರು ಮುಂಬೈನ ತಾಜ್ ಹೊಟೆಲ್ ಮೇಲೆ ದಾಳಿ ನಡೆಸಿ ವಿಧ್ವಂಸಕ ಕೃತ್ಯವೆಸಗಿದ್ದರು. ದಾಳಿಯಲ್ಲಿ ಸೆರೆ ಸಿಕ್ಕ ಉಗ್ರ ಅಜ್ಮಲ್ ಕಸಬ್ ನನ್ನು ಗಲ್ಲಿಗೇರಿಸಲಾಗಿತ್ತು. ಈ ಬಗ್ಗೆಯೂ ಬರೆದಿರುವ ಖೊಸ, ಕಸಬ್ ಪಾಕಿಸ್ತಾನದ ಲಷ್ಕರ್-ಎ- ತೈಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕ ಎಂಬುದು ತನಿಖೆ ವೇಳೆ ಬಯಲಾಗಿತ್ತು ಖೋಸಾ ಹೇಳಿದ್ದಾರೆ.
Advertisement