ನಾಸಿಕ್: ಉತ್ತರ ಪ್ರದೇಶದಲ್ಲಿ ಮದ್ಯ ಮಾರಾಟ, ಹಾಗೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರಿಗೆ ಸನ್ಯಾಸ ದೀಕ್ಷೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಬಾರ್ ಮಾಲೀಕ ಸಚಿನ್ ದತ್ತ ಎಂಬ ವ್ಯಕ್ತಿಗೆ ನಿರಂಜನಿ ಅಖಾಡ ಸನ್ಯಾಸ ದೀಕ್ಷೆ ನೀಡಿ ಮಹಾಮಂಡಲೇಶ್ವರ ಎಂದು ಘೋಷಿಸಿರುವುದು ಹಿಂದೂ ಧಾರ್ಮಿಕ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶ ಸಚಿವ ಶಿವಪಾಲ್ ಯಾದವ್ ಗೆ ನಿಕಟವಾಗಿದ್ದ ಸಚಿನ್ ದತ್ತ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ, ಆದರೂ ಈತನಿಗೆ ಸನ್ಯಾಸ ದೀಕ್ಷೆಯನ್ನು ನೀಡಿರುವುದನ್ನು ಹಿಂದೂ ಧಾರ್ಮಿಕ ಮುಖಂಡರು ವಿರೋಧಿಸಿದ್ದಾರೆ.
ಅಷ್ಟೇ ಅಲ್ಲದೇ ನಾಸಿಕ್ ನ ಕುಂಭಮೇಳದಲ್ಲಿ ಭಾಗವಹಿಸದಂತೆ ಸಚ್ಚಿನಾನಂದ ಗಿರಿ( ಸಚಿನ್ ದತ್ತ) ಗೆ ಅಖಿಲ ಭಾರತೀಯ ಅಖಾಡ ಪರಿಷತ್ ನಿಷೇಧ ವಿಧಿಸಿದೆ. ನಾಸಿಕ್ ಕುಂಭ ಮೇಳದಲ್ಲಿ ಭಾಗವಹಿಸುವ ಸಂತ ಸಭೆಯ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಅಗ್ನಿ ಅಖಾಡದ ಮಹಾಮಂಡಲೇಶ್ವರನಾಗಿರುವ ಸಚ್ಚಿದಾನಂದ ಗಿರಿ ಆರೋಪ ಮುಕ್ತನಾಗುವವರೆಗೂ ಆತನಿಗೆ ನಾಸಿಕ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಪ್ರವೇಶ ನಿರಾಕರಿಸಲಾಗಿದೆ.
ಆಗಸ್ಟ್ 29 , ಸೆಪ್ಟೆಂಬರ್ 13 ಹಾಗೂ 25 ರಂದು ನಡೆಯಲಿರುವ ಐತಿಹಾಸಿಕ ಶಾಹಿ ಸ್ನಾನ ಕಾರ್ಯಕ್ರಮದಲ್ಲಿ ಸಾಧು-ಸಂತರು ಸೇರಿದಂತೆ 80 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಕುಂಭ ಮೇಳದಲ್ಲಿ ಭಾಗವಹಿಸದಂತೆ ಯಾರ ಮೇಲೂ ನಿಷೇಧ ಹೇರಲು ಸಾಧ್ಯವಿಲ್ಲ. ಆದರೂ ಭಾರತೀಯ ಅಖಾಡ ಪರಿಷತ್ ನಿಷೇಧ ವಿಧಿಸಿದೆ.
Advertisement