ಮುಂಬೈ: ಯಾಕೂಬ್ ಮೆಮನ್ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದರ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆದೇಶ ಕಾರಣ ಎಂದು ಮುಂಬೈ ಪೊಲೀಸ್ ಮೂಲಗಳು ಹೇಳುತ್ತಿವೆ.
ಮುಂಬೈ ನಲ್ಲಿರುವ ತನ್ನ ಬೆಂಬಲಿಗರಿಗೆ ಕರೆ ಮಾಡಿದ್ದ ದಾವೂದ್ ಇಬ್ರಾಹಿಂ, ಯಾಕೂಬ್ ಮೆಮನ್ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಜನರು ಸೇರುವಂತೆ ಸೂಚನೆ ನೀಡಿದ್ದ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ. ಮುಂಬೈ ಸ್ಫೋಟದ ಪ್ರಕರಣದಲ್ಲಿ ಆರೋಪ ಸಾಬೀತಾಗಿ ಗಲ್ಲಿಗೇರಿಸಿದ್ದ ಉಗ್ರ ಯಾಕೂಬ್ ಮೆಮನ್ ನ ಅಂತ್ಯ ಸಂಸ್ಕಾರದ ವೇಳೆ 20000 ಜನ ಸೇರಿದ್ದು ದೇಶಾದ್ಯಂತ ಅಚ್ಚರಿಯ ಸುದ್ದಿಯಾಗಿತ್ತು. ಅಪ್ಪಾರ ಸಂಖ್ಯೆಯಲ್ಲಿ ಜನ ಸೇರುವುದರ ಹಿಂದೆ ದಾವೂದ್ ಇಬ್ರಾಹಿಂ ನ ಕೈವಾಡವಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಆದರೆ ಸಮುದಾಯದ ಮುಖಂಡರು ಇದನ್ನು ಅಲ್ಲಗಳೆದಿದ್ದು ಯಾಕೂಬ್ ಮೆಮನ್ ಯಾರು ಎಂದು ತಿಳಿಯದ ಹಲವರು ಕುತೂಹಲದಿಂದ ಅಂತ್ಯಸಂಸ್ಕಾರದ ವೇಳೆ ಸೇರಿದ್ದರು ಎಂದು ಹೇಳಿದ್ದಾರೆ. ಯಾಕೂಬ್ ಮೆಮನ್ ಪ್ರಕರಣದಲ್ಲಿ ತಾವು ಪ್ರತಿಕ್ರಿಯಿಸಿದರೆ ಕ್ಷಮಾದಾನ ಅರ್ಜಿಗೆ ತೊಡಕುಂಟಾಗಬಹುದೆಂದು ದಾವೂದ್ ಇಬ್ರಾಹಿಂ ಹಾಗೂ ಚೋಟಾ ಶಕೀಲ್ ಪ್ರತಿಕ್ರಿಯಿಸಿರಲಿಲ್ಲ. ಆದರೆ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡಿದ್ದರಿಂಡ ಆಕ್ರೋಶಗೊಂಡ ಚೋಟಾ ಶಕೀಲ್ ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾನೆ.
Advertisement